ರಾಜಕಾರಣಿಗಳು ಅಧಿಕಾರಕ್ಕಾಗಿ ಹಪಹಪಿಸುವುದು ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದ್ದು, ಜನ ಇದಕ್ಕೆ ಒಗ್ಗಿಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ, ಮಠಾಧೀಶರು ತಮ್ಮ ಶಿಷ್ಯಂದಿರಲ್ಲಿ ನೈತಿಕ ಪ್ರಜ್ಞೆ, ಸಹಿಷ್ಣುತೆ, ನಿಸ್ವಾರ್ಥ ಮನೋಭಾವ, ಶಾಂತಿ, ಸಮಾಧಾನ ಮೈಗೂಡಿಸಿಕೊಳ್ಳಲು ಅಗತ್ಯವಾದ ಉಪದೇಶ ಮಾಡಿ ಸಮಾಜವನ್ನು ಮರ್ಯಾದೆಯಿಂದ ಬದುಕುವಂತೆ ಪ್ರೇರೇಪಿಸಬೇಕು. ಆದರೆ ಈಗ ಮಠಾಧೀಶರ ಜುಟ್ಟಿಗೂ ರಾಜಕಾರಣಿಗಳು ಕೈಹಾಕಿದ್ದಾರೆ. ಆಗಾಗ ಅನುದಾನ ಬಿಡುಗಡೆ ಮಾಡಿ ಅವರನ್ನು ತಮ್ಮ ಹಂಗಿಗೆ ಸಿಕ್ಕಿಸುತ್ತಿದ್ದಾರೆ. ಇದನ್ನು ಅರಿಯದೆ ಅಧಿಕಾರಸ್ಥ ಶಿಷ್ಯರ ನಡೆನುಡಿಯ ಮೋಡಿಗೊಳಗಾಗಿ, ತಮ್ಮಲ್ಲಿ ತೋರುತ್ತಿರುವ ಭಯ ಭಕ್ತಿಯು ತಮ್ಮ ಮೇಲಿನ ಅಭಿಮಾನ, ಪೂಜ್ಯಭಾವನೆಯಿಂದ ಎಂದು ತಿಳಿದು, ಅವರ ಗುಣಾವಗುಣಗಳನ್ನು ಪರಿಗಣಿಸದೆ, ಶರಣು ಬಂದರೆಂದು ಅವರನ್ನು ಸಂರಕ್ಷಿಸಲು ಮಠಾಧೀಶರು ಮುಂದಾಗುವುದು ಅಚ್ಚರಿದಾಯಕ.