ಉಪಚುನಾವಣೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳ ಪ್ರಚಾರದಲ್ಲಿ ಸಾಮಾನ್ಯವಾಗಿ ರಾಷ್ಟ್ರೀಯ ರಾಜಕೀಯ ಪಕ್ಷಗಳ ಧುರೀಣರು ಪಾಲ್ಗೊಳ್ಳುವುದಿಲ್ಲ. ದೇಶದಲ್ಲಿ ಇದಕ್ಕೆ ದೀರ್ಘ ಇತಿಹಾಸ ಇದೆ. ಆದರೆ ಈ ಪರಂಪರೆಯನ್ನು ಬದಿಗೊತ್ತಿ, ಹೈದರಾಬಾದ್ ಮಹಾನಗರಪಾಲಿಕೆ ಚುನಾವಣಾ ಪ್ರಚಾರಕ್ಕೆ ರಾಷ್ಟ್ರೀಯ ಧುರೀಣರು ದೊಡ್ಡ ಸಂಖ್ಯೆಯಲ್ಲಿ ದಾಂಗುಡಿ ಇಟ್ಟಿದ್ದರು. ಇದರಿಂದ, ಈ ಚುನಾವಣೆಯ ಫಲಿತಾಂಶದ ಮೇಲೇ ಸರ್ಕಾರದ ಸ್ಥಿರತೆ ಮತ್ತು ದೇಶದ ಭವಿಷ್ಯ ಅಡಗಿದೆಯೆನೋ ಎನ್ನುವಂತಹ ಭಾವನೆ ಉಂಟಾಗಿದೆ.