‘ಹಮ್ಮು ಬಿಟ್ಟು ಕೂಲಿಗಿಳಿದರು’ ವಿಶೇಷ ವರದಿಯು (ಪ್ರ.ವಾ., ಆ. 2) ಒಂದು ವಿಧದಲ್ಲಿ ಖುಷಿ ಕೊಟ್ಟರೂ ಒಡನೆಯೇ ವೇದನೆಗೂ ಎಡೆ ಮಾಡಿಕೊಡುತ್ತದೆ. ಏನೇನೋ ಕನಸು ಹೊತ್ತು ವಿದ್ಯಾಭ್ಯಾಸ ಮುಗಿಸಿ, ನಗರಕ್ಕೆ ಬಂದು, ಕೈತುಂಬಾ ಸಂಬಳ ಪಡೆದು ಖುಷಿಪಟ್ಟ ಯುವಜನರ ಪಾಲಿಗೆ ಕೊರೊನಾ ಸೋಂಕು ಮುಳುವಾಗಿದೆ. ಕೆಲಸವಿಲ್ಲದೆ ಅಥವಾ ಇದ್ದ ಕೆಲಸ ಕಳೆದುಕೊಂಡ ಬಹುಮಂದಿ ಯುವಕ, ಯುವತಿಯರು ಈ ಮುಂಚೆ ತಾವು ತೊರೆದ ಗ್ರಾಮಗಳತ್ತ ಮುಖ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈಚಿನ ವರ್ಷಗಳಲ್ಲಿ ಯುವಪೀಳಿಗೆ ಹೆಚ್ಚಾಗಿ ಕಾಣುತ್ತಿರಲಿಲ್ಲ. ಪ್ರತೀ ಮನೆಯಲ್ಲೂ ಬಹುಪಾಲು ವೃದ್ಧರೇ ಇರುವಂತಾಗಿತ್ತು. ಬೇಸಾಯದ ಭೂಮಿ ಬೀಳುಬಿದ್ದಿತ್ತು. ಇದೀಗ ವಿದ್ಯಾವಂತ ಯುವಪೀಳಿಗೆಯು ಬೀಳುಬಿದ್ದ ಜಮೀನಿನಲ್ಲಿ ಕೃಷಿ ಕಾರ್ಯದ ಸಂಕಲ್ಪ ಮಾಡಿದೆ.