ತಮ್ಮ ಸ್ವಚ್ಛಂದದ ಬದುಕಿಗೆ ಅಡ್ಡಿಯಾದ ಅಪ್ಪಂದಿರನ್ನೇ ಮಕ್ಕಳು ಕೊಂದು ಹಾಕಿರುವ ಘಟನೆಗಳು ಬೆಂಗಳೂರು, ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದಿವೆ. ಹಾಗಿದ್ದರೆ ನಾವು ಎಲ್ಲಿ ಎಡವಿದ್ದೇವೆ, ಎಲ್ಲಿಗೆ ಬಂದು ನಿಂತಿದ್ದೇವೆ, ಮತ್ತೆಲ್ಲಿಗೆ ತಲುಪುತ್ತೇವೆ ಎಂದು ನೆನೆದರೆ ಭಯವಾಗುತ್ತದೆ. ಈ ಮಕ್ಕಳು ಹಳ್ಳ ಹಿಡಿದಿರುವ ನೈತಿಕತೆಯ ರೂಪಕಗಳಷ್ಟೇ. ಇಂತಹ ಮನಃಸ್ಥಿತಿಯವರು ಸಮಾಜದಲ್ಲಿ ಬಹುಮಂದಿ ಸಿಗುತ್ತಾರೆ. ಈ ಪ್ರಕರಣಗಳಲ್ಲಿ ಮಕ್ಕಳಿಗೆ ಬೇಕಿದ್ದ ನೈತಿಕ ಶಿಕ್ಷಣ, ಹೆತ್ತವರೊಡನೆ ಭಾವನಾತ್ಮಕ ಸಂಬಂಧ, ಸಮಾಜದೊಂದಿಗಿನ ಒಡನಾಟದ ಕೊರತೆಗಳು ಎದ್ದು ಕಾಣುತ್ತವೆ. ಹಾಗಿದ್ದರೆ ಇವೆಲ್ಲವನ್ನೂ ಈ ತಲೆಮಾರಿನ ಮಕ್ಕಳಿಗೆ ಸಮರ್ಪಕವಾಗಿ ತುಂಬಬೇಕಿದ್ದ ಕಾರ್ಯ ಯಾರದ್ದು? ಇದು ಸಮಾಜ, ಹೆತ್ತವರು, ಶಾಲೆಯವರು ಎಲ್ಲರೂ ಚಿಂತಿಸಬೇಕಾದ ವಿಚಾರ.