ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಜನಸಾಮಾನ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸ್ ಇಲಾಖೆಯ ವೈಫಲ್ಯವನ್ನು ಖಂಡಿಸಲಾಗುತ್ತಿದೆ. ಆದರೆ ಈ ವೈಫಲ್ಯದಲ್ಲಿ ತಮ್ಮ ಪಾತ್ರವೂ ಇರುವುದನ್ನು ಸಾರ್ವಜನಿಕ ವಲಯ ಮರೆತಂತಿದೆ. ಪ್ರಕರಣದ ಸಂಬಂಧ ಬಂಧಿಸಲಾಗಿರುವ ಆರೋಪಿ ಗಳು ಆಗಾಗ್ಗೆ ಮೈಸೂರು ನಗರಕ್ಕೆ ಬಂದು ಹೋಗುತ್ತಿದ್ದು, ಇದಕ್ಕೂ ಮೊದಲು ಹಲವು ಬಾರಿ ಸುಲಿಗೆ, ದೌರ್ಜನ್ಯ ಎಸಗಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ತಮ್ಮ ವಿರುದ್ಧ ಯಾವುದೇ ದೂರು ದಾಖಲಾಗದೆ ಇದ್ದದ್ದು ಮತ್ತೆ ಮತ್ತೆ ಇಲ್ಲಿಗೆ ಬರಲು ಪ್ರೇರೇಪಿಸಿತು ಎಂದಿದ್ದಾರೆ. ಈ ಮೊದಲು ದೌರ್ಜನ್ಯಕ್ಕೊಳಗಾದವರು ಪೊಲೀಸರಲ್ಲಿ ಅಂದೇ ದೂರು ಸಲ್ಲಿಸಿ, ಪೊಲೀಸರು ಆಗಲೇ ಸೂಕ್ತ ಕ್ರಮ ಕೈಗೊಂಡಿ ದ್ದರೆ, ಇಂದು ಒಬ್ಬ ಅಮಾಯಕ ಯುವತಿ ಅತ್ಯಾಚಾರಕ್ಕೆ ಒಳಗಾಗುವುದನ್ನು ತಪ್ಪಿಸಬಹುದಾಗಿತ್ತು.