ಪಿಎಂ– ಕೇರ್ಸ್ ನಿಧಿಯು ಆರಂಭದಿಂದಲೂ ಗೊಂದಲದ ಗೂಡಾಗಿದೆ. ದೇಣಿಗೆ ನೀಡಿದವರ ವಿವರ
ಬಹಿರಂಗಪಡಿಸದೇ ಇರುವುದರಿಂದ ಯಾರು ಎಷ್ಟು ದೇಣಿಗೆ ನೀಡಿದ್ದಾರೆ ಹಾಗೂ ಅವರ ಹಣದ ಮೂಲ ಏನು ಎಂಬುದನ್ನು ಮರೆಮಾಚಿದಂತಾಗುತ್ತದೆ. ಟ್ರಸ್ಟಿಗಳು ಹಾಗೂ ಸಲಹೆಗಾರರಾಗಿ ನೇಮಕಗೊಂಡವರು ಗಣ್ಯರು ಎಂದಮಾತ್ರಕ್ಕೆ ಈ ನಿಧಿಗೆ ವಿಶ್ವಾಸಾರ್ಹತೆ ಬರುವುದಿಲ್ಲ. ಈ ನಿಧಿಯ ಕುರಿತು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ನೀಡಲು ಮತ್ತು ಮಹಾಲೇಖಪಾಲರಿಂದ ಲೆಕ್ಕಪರಿಶೋಧನೆ ಮಾಡಿಸಲು ಸರ್ಕಾರ ನಿರಾಕರಿಸಿರುವುದು ನಿಧಿಯ ಕುರಿತು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.