ಕೆಂಪೇಗೌಡ ಅವರಲ್ಲಿದ್ದ ಆದರ್ಶ ಗುಣ, ದೂರದರ್ಶಿತ್ವ, ಜನಪರ ಕಾಳಜಿ, ಉದಾತ್ತ ಧ್ಯೇಯ ಯಾವುವೂ ನಮ್ಮ ಜನಪ್ರತಿನಿಧಿಗಳಲ್ಲಿ ಇಲ್ಲದಿರುವುದು ಎದ್ದು ಕಾಣುತ್ತದೆ. ಉದಾಹರಣೆಗೆ, ಕೆಂಪೇಗೌಡರು ಅಂದು ಕಟ್ಟಿಸಿದ್ದ ಹಲವಾರು ಕೆರೆಗಳನ್ನು ಮುಚ್ಚಿ ರಿಯಲ್ ಎಸ್ಟೇಟ್ ದಂಧೆಯನ್ನಾಗಿ ಮಾಡಿರುವುದನ್ನು, ಆಗಾಗ್ಗೆ ಸುರಿಯುವ ಭಾರಿ ಮಳೆಯು ಜಗಜ್ಜಾಹೀರು ಮಾಡುತ್ತಲೇ ಇರುತ್ತದೆ. ನಗರದ ಆಡಳಿತ ಕೇಂದ್ರವಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ರಸ್ತೆಗಳಲ್ಲಿನ ಗುಂಡಿಗಳನ್ನು ಸರಿಪಡಿಸದೇ ಇರುವುದರಿಂದ ಅಪಘಾತಕ್ಕೀಡಾಗಿ ಹಲವು ಮಂದಿ ಸಾವಿಗೀಡಾಗಿ ರುವುದು ಕಣ್ಮುಂದೆಯೇ ಇದೆ. ಇವು ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿವೆ. ಕೆಂಪೇಗೌಡರ ಹಿರಿಮೆಯನ್ನು ಸಾರುವ ಕೆಲಸಗಳು ಆಗುತ್ತಿಲ್ಲ. ಸರ್ಕಾರಗಳು ಗಣ್ಯರ ಪ್ರತಿಮೆಗಳನ್ನು ನಿರ್ಮಿಸುವುದಕ್ಕಿಂತ ಹೆಚ್ಚಾಗಿ ಅಂತಹವರ ವ್ಯಕ್ತಿತ್ವ ಹಾಗೂ ಆದರ್ಶ ಗುಣಗಳನ್ನು ಅರಿತು ಅದರಂತೆ ನಡೆಯುವುದನ್ನು ಕಲಿಯಬೇಕಿದೆ.