‘ಜೀವದಾಯಿನಿಯರು ಜೀವ ಕಳೆದುಕೊಂಡಾರು!’ ಎಂಬ ರೂಪ ಹಾಸನ ಅವರ ಲೇಖನ (ಸಂಗತ, ಮೇ 11) ಓದಿದೆ. ಇಲ್ಲಿ ಮತ್ತಷ್ಟು ಅಂಶಗಳನ್ನು ನಾವು ಗಮನಿಸಬೇಕಿದೆ. ನಮ್ಮ ಪಶ್ಚಿಮ ಘಟ್ಟಗಳಿಂದ ಹರಿದು ಬರುವ ನದಿ ನೀರನ್ನು ನೂರಾರು ಕಿ.ಮೀ. ದೂರದ ಕಾರ್ಖಾನೆಗಳಿಗೆ ನೀಡಲಾಗುತ್ತದೆ. ಹಾಗೆಯೇ ಬಹಳ ದೂರದ ನಗರಗಳ ಕುಡಿಯುವ ನೀರಿಗಾಗಿಯೂ ಕೊಂಡೊಯ್ಯಲಾಗುತ್ತಿದೆ. ಅದಕ್ಕಾಗಿ ಕೋಟ್ಯಂತರ ರೂಪಾಯಿಯ ಯೋಜನೆಯನ್ನು ಸರ್ಕಾರಗಳು ಕಾರ್ಯಗತಗೊಳಿಸುತ್ತಿವೆ. ಆದರೆ ಮುಂದೊಂದು ದಿನ ಈ ಜಲಮೂಲಗಳೇ ಬತ್ತಿಹೋಗಬಹುದೆಂಬ ಕನಿಷ್ಠ ಊಹೆಯನ್ನೂ ನಮ್ಮ ಸರ್ಕಾರವಾಗಲೀ ಅಧಿಕಾರಿಗಳಾಗಲೀ ಮಾಡುವುದಿಲ್ಲ. ಹೀಗಾಗಿ, ಸರ್ಕಾರದ ಬೊಕ್ಕಸ ಅಪವ್ಯಯವಾಗುತ್ತಿದೆಯೇ ವಿನಾ ಜೀವದಾಯಿನಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿದಂತೆ ಆಗುವುದಿಲ್ಲ. ಮಳೆ ನೀರು ಅಲ್ಲಲ್ಲೆ ಇಂಗುವಂಥ ಸಣ್ಣ ಸಣ್ಣ ಕೆರೆ ಕಟ್ಟೆಗಳನ್ನು ನಿರ್ಮಿಸುವ ಯೋಜನೆಯ ಕಡೆ ಸರ್ಕಾರ ಪರಿಣಾಮಕಾರಿಯಾಗಿ ಲಕ್ಷ್ಯ ವಹಿಸುವುದಿಲ್ಲ. ಇದರಿಂದ ನಮ್ಮ ಜೀವದಾಯಿನಿಯರು ಜೀವ ಕಳೆದುಕೊಳ್ಳುವ ಅಪಾಯ ಇದ್ದೇಇದೆ.