ಮೊದಲನೆಯದಾಗಿ, ಈ ರೀತಿಯ ಬೀಸು ಹೇಳಿಕೆಗಳು ಸಚಿವರಿಗೆ ಶೋಭೆ ತರುವುದಿಲ್ಲ. ಎರಡನೆಯದಾಗಿ, ಸಚಿವರು ‘ಇತಿಹಾಸದಲ್ಲಿ ಗತಿಸಿದ ಅನ್ಯಾಯ, ದಬ್ಬಾಳಿಕೆ, ಆಕ್ರಮಣಗಳಿಗೆ ಸಂಬಂಧಿಸಿದ ಸಂಗತಿಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವಂತಿರಬೇಕು’ ಎಂದಿದ್ದಾರೆ. ಈ ಮಾತುಗಳನ್ನು ಭಾರತದ ಮೇಲೆ ನಡೆದ ಆಕ್ರಮಣಗಳನ್ನು ಮತ್ತು ಅದರ ವಿರುದ್ಧ ನಮ್ಮ ಅಂದಿನ ತಲೆಮಾರಿನವರು ನೀಡಿದ ಪ್ರತಿರೋಧಗಳನ್ನು ಅರ್ಥಮಾಡಿಕೊಳ್ಳಲು ಮಾತ್ರ ಸೀಮಿತಗೊಳಿಸಿಕೊಳ್ಳಬಾರದು. ಚರಿತ್ರೆ ಎಂದರೆ ಕೇವಲ ಹಿಂದಿನ ರಾಜಕೀಯ ಎನ್ನುವ ವ್ಯಾಖ್ಯೆ ಅಪ್ರಸ್ತುತವಾಗಿ ದಶಕಗಳೇ ಕಳೆದಿವೆ. ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸಗಳು ಅತ್ಯಂತ ಸಂಕೀರ್ಣವಾದವು. ಅಲ್ಲಿ ನಡೆದ ಅಂತರ್ ಸಂಘರ್ಷಗಳಿಗೂ ಅನ್ವಯಿಸಿ ನೋಡಬೇಕಾಗುತ್ತದೆ.