ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ‘ಉದ್ಯೋಗ ಲಕ್ಷ್ಮಿ’ ಭರವಸೆ ನೀಡಬಾರದೇ?

Last Updated 20 ಜನವರಿ 2023, 22:00 IST
ಅಕ್ಷರ ಗಾತ್ರ

ಕೈದಿಗಳ ವಿಜೃಂಭಣೆ ನಿಲ್ಲಲಿ
ರಾಮನಗರ ಜೈಲಿನಲ್ಲಿ ಕೈದಿಗಳು ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿರುವ ವಿಷಯವನ್ನು ಮಾಧ್ಯಮಗಳಿಂದ ತಿಳಿದು ದಿಗ್ಭ್ರಮೆ ಹಾಗೂ ವಿಸ್ಮಯವಾಯಿತು. 70ರ ದಶಕದಲ್ಲಿ ರೌಡಿಗಳ ವಿಜೃಂಭಣೆಯನ್ನು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಅದು ಮರುಕಳಿಸುವ ಸೂಚನೆ ಇದರಿಂದ ಸಿಗುತ್ತಿದೆ. ಇದರಿಂದಾಗಿ ಜೈಲುಗಳು ಎತ್ತ ಸಾಗುತ್ತಿವೆ ಎಂಬ ಪ್ರಶ್ನೆ ಮೂಡುತ್ತದೆ.
–ಡಾ. ಗೋವಿಂದಸ್ವಾಮಿ ನಾಯಕ್, ಅಮ್ಮನಪುರ

***

‘ಉದ್ಯೋಗ ಲಕ್ಷ್ಮಿ’ ಭರವಸೆ ನೀಡಬಾರದೇ?
ಮುಂಬರುವ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ರಾಜಕೀಯ ಪಕ್ಷಗಳು ಮಹಿಳೆಯರ ಮನವೊಲಿಸುವ ಕೆಲಸದಲ್ಲಿ ತೊಡಗಿವೆ. ಅವರಿಗೆ ಕೊಡುಗೆಗಳನ್ನು ನೀಡಲು ಮುಂದಾಗಿವೆ. ಇದಕ್ಕೆ ಬದಲಾಗಿ ಪ್ರತೀ ಕುಟುಂಬಕ್ಕೆ ಒಬ್ಬ ಉದ್ಯೋಗ ಲಕ್ಷ್ಮಿ ಅಥವಾ ಉದ್ಯೋಗ ಪುರುಷನನ್ನು ಹುಟ್ಟುಹಾಕುವಂಥ ಭರವಸೆಗಳನ್ನು ಪಕ್ಷಗಳು ನೀಡಬೇಕು. ಗೃಹಲಕ್ಷ್ಮಿಗೆ ಕೊಟ್ಟ ಹಣ ಖರ್ಚಾಗಬಹುದು, ಅದೇ ಉದ್ಯೋಗ ಕೊಟ್ಟಿದ್ದು ವರವಾಗಬಹುದು. ಈ ದಿಸೆಯಲ್ಲಿ ಪಕ್ಷಗಳು ಯೋಚಿಸುವಂತಾಗಲಿ.
–ರವಿ ಹೊಟ್ಟೂರ, ಹಾನಗಲ್

***

ಕಡತಗಳಲ್ಲಿ ‘ಬಂದಿ’ಯಾದ ಕನಕ
ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಮೂಲಕ ಕನಕದಾಸರ ಸಮಗ್ರ ಸಾಹಿತ್ಯವನ್ನು ದೇಶದ 14 ಭಾಷೆಗಳಿಗೆ ಅನುವಾದ ಮಾಡುವ ಯೋಜನೆಯನ್ನು 2014ರಲ್ಲಿ ರಾಜ್ಯ ಸರ್ಕಾರ ಕೈಗೊಂಡಿತ್ತು. ಆ ಯೋಜನೆಯ ಪ್ರಕಾರ, 14 ಭಾಷೆಗಳಲ್ಲಿರುವ ಅನುವಾದಕರನ್ನು ಒಟ್ಟು ಸೇರಿಸಿ, ಒಂದೊಂದು ಭಾಷೆಗೆ ಒಬ್ಬರು ಪ್ರಧಾನ ಸಂಪಾದಕರನ್ನು ನೇಮಿಸಲಾಯಿತು. ಆದಷ್ಟು ಬೇಗ ಅನುವಾದ ಕಾರ್ಯ ಪೂರ್ಣಗೊಳಿಸುವಂತೆ ಸರ್ಕಾರ ಒತ್ತಾಯಪಡಿಸಿತು. ಈ ಮಧ್ಯೆ ಮಂಗಳೂರು, ಬೆಂಗಳೂರಿನಲ್ಲಿ ಅನುವಾದಕರಿಗೆ ಕಮ್ಮಟ ಗಳನ್ನು ನಡೆಸಲಾಯಿತು. ನಾನು ತುಳು ಭಾಷೆಯ ಅನುವಾದಕನಾಗಿ ಕೆಲಸ ಮಾಡಿದ್ದೇನೆ. ಬಹಳ ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ದುಡಿದ ಅನುವಾದಕರ ತಂಡ, 2018ರಲ್ಲಿ ಎಲ್ಲಾ ಭಾಷೆಗಳ ಅನುವಾದವನ್ನು ಪೂರ್ಣಗೊಳಿಸಿ, ಅದನ್ನು ಸರ್ಕಾರಕ್ಕೆ ಸಲ್ಲಿಸಿತು. ಅದೇ ವರ್ಷ ಅದನ್ನು ಟೆಂಡರ್‌ ಕರೆದು ಮುದ್ರಣಕ್ಕೆ ನೀಡಲಾಯಿತು ಎಂಬ ವಿವರಗಳು ಬಂದವು.

ಈ ಮಧ್ಯೆ, ಆಡಳಿತದ ಚುಕ್ಕಾಣಿ ಹಿಡಿದ ಪಕ್ಷ ಬದಲಾಯಿತು. ಹೊಸ ಮುಖ್ಯಮಂತ್ರಿ, ಸಂಸ್ಕೃತಿ ಸಚಿವರು, ಕಾರ್ಯದರ್ಶಿಗಳು ಬಂದರು. ಅನುವಾದಕರ ನಾಲ್ಕು ವರ್ಷಗಳ ಶ್ರಮ ವ್ಯರ್ಥವಾಗಿ ಬಿದ್ದಿದೆ. ಆಮೇಲೆ ಬೇರೆ ಬೇರೆ ಮಂತ್ರಿಗಳಿಗೆ ಬೇಕಾದಂತೆ ಅದರ ಪ್ರಸ್ತಾವನೆಯ ಭಾಗವನ್ನು ನಾಲ್ಕು ಬಾರಿ ಪರಿಷ್ಕರಣೆ ಮಾಡಲಾಗಿದೆ. ಇಷ್ಟೆಲ್ಲ ಆದರೂ ಕನಕನ ಸಮಗ್ರ ಸಾಹಿತ್ಯದ ಅನುವಾದ ಯೋಜನೆಗೆ ಮುಕ್ತಿ ದೊರೆತಿಲ್ಲ. ಎಲ್ಲ ಅನುವಾದಕರಿಗೂ ಡಿಟಿಪಿ ಮಾಡಿದವರಿಗೂ ಹಣ ಪೂರ್ಣವಾಗಿ ಸಂದಾಯವಾಗಿಲ್ಲ. ಸರ್ಕಾರದ ಹಣ ಮತ್ತು ಸುಮಾರು ಎಂಬತ್ತು ಅನುವಾದಕರ ನಾಲ್ಕು ವರ್ಷಗಳ ಶ್ರಮ ವ್ಯರ್ಥವಾಗದಂತೆ ಸರ್ಕಾರ ಮನಸ್ಸು ಮಾಡಬೇಕಾಗಿದೆ. ಈ ಯೋಜನೆಯನ್ನು ರಾಜಕೀಯಗೊಳಿಸದೆ, ಕನ್ನಡನಾಡಿನ ಶ್ರೇಷ್ಠ ಸಂತಕವಿಯ ಸಾಧನೆಯನ್ನು 14 ಭಾಷೆಗಳಿಗೆ ವಿಸ್ತರಿಸಬೇಕಾಗಿದೆ. ಈ ಸಾಂಸ್ಕೃತಿಕ ಜವಾಬ್ದಾರಿಯನ್ನು ಕಡೆಗಣಿಸಿದರೆ ಅದು ಕನಕನಿಗೆ ತೋರುವ ಅಗೌರವವಾಗುತ್ತದೆ.
–ಟಿ.ಎ.ಎನ್. ಖಂಡಿಗೆ, ಮೂಡುಬಿದಿರೆ

***

ಡಿಜಿಟಲ್ ವ್ಯವಹಾರಕ್ಕೂ ಶುಲ್ಕ!
ನಾಗರಿಕರು ಕರೆನ್ಸಿ ನೋಟುಗಳ ಬಳಕೆಯನ್ನು ಕಡಿಮೆ ಮಾಡಲು ಹಾಗೂ ರೂಪೆ ಡೆಬಿಟ್‌ ಕಾರ್ಡ್‌, ಯುಪಿಐ ವಹಿವಾಟಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ₹ 2,600 ಕೋಟಿ ವಿನಿಯೋಗಿಸುತ್ತಿರುವ ಮಾಹಿತಿ ಮಾಧ್ಯಮ ಗಳಲ್ಲಿ ವರದಿಯಾಗಿದೆ. ಡಿಜಿಟಲ್ ರೂಪದಲ್ಲಿ ವ್ಯವಹರಿಸುವುದಕ್ಕೆ ಪ್ರೋತ್ಸಾಹ ನೀಡುವ ಉದ್ದೇಶವು ಇದರ ಹಿಂದೆ ಇದೆ. ಈ ಮೊದಲು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಇಂಧನ ವೆಚ್ಚವನ್ನು ಭರಿಸಿದಾಗ ಗ್ರಾಹಕರಿಗೆ ಲಾಭವಾಗುತ್ತಿತ್ತು. ನಂತರದಲ್ಲಿ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿಸಿದಲ್ಲಿ, ಗ್ರಾಹಕರು ಹೆಚ್ಚುವರಿ ಶುಲ್ಕ ಭರಿಸುವ ಪ್ರಕ್ರಿಯೆ ಆರಂಭಿಸಲಾಯಿತು. ಕ್ರೆಡಿಟ್ ಕಾರ್ಡ್‌ಗಳ ವ್ಯವಹಾರಕ್ಕೆ ಶುಲ್ಕ ವಿಧಿಸುವುದು ಸ್ವಲ್ಪಮಟ್ಟಿಗೆ ಸಮರ್ಥನೀಯವೆನಿಸಿದರೂ, ಇತ್ತೀಚೆಗೆ ಡೆಬಿಟ್ ಕಾರ್ಡ್ ಮೂಲಕ ನಮ್ಮದೇ ದುಡ್ಡನ್ನು ಇಂಧನ ಭರ್ತಿಗೆ ಬಳಸಿದರೂ ಬ್ಯಾಂಕ್‌ವೊಂದು ಶುಲ್ಕ ವಿಧಿಸುತ್ತಿದೆ. ಇಂಧನ ವೆಚ್ಚವಾಗಿ ₹4,000 ಪಾವತಿಸಿದ್ದಕ್ಕೆ ₹ 37.40 ಶುಲ್ಕ ಆಕರಿಸಲಾಗಿದೆ. ಬ್ಯಾಂಕ್‍ನಲ್ಲಿ ಕೇಳಿದರೆ, ಇಂಧನ ಕಂಪನಿಯವರ ಕಡೆ ಕೈತೋರಿಸುತ್ತಾರೆ. ಕನಿಷ್ಠಪಕ್ಷ ಡೆಬಿಟ್ ಕಾರ್ಡ್‌ ಪಾವತಿಗಳನ್ನಾದರೂ ಶುಲ್ಕರಹಿತವಾಗಿಸಲು ಎಲ್ಲ ಬ್ಯಾಂಕ್‍ಗಳಿಗೆ ಆರ್‌ಬಿಐ ಸೂಚನೆ ನೀಡಲಿ.
–ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು

***

ಅಪ್ರಾಮಾಣಿಕತೆಯ ಆಗರ, ಪ್ರಾಮಾಣಿಕ ನುಡಿ!
‘ನಾನು ನನ್ನ ಜೀವನದಲ್ಲಿ 99 ಪರ್ಸೆಂಟ್‌ ಅಲ್ಲ, ಒಂದು ಪರ್ಸೆಂಟ್‌ ಪ್ರಾಮಾಣಿಕನಾಗಿದ್ದೇನೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಜ. 19). ಒಂದು ಪರ್ಸೆಂಟ್ ಮಾತ್ರ ಪ್ರಾಮಾಣಿಕ ಎಂಬ ಮಾತನ್ನು ಸಚಿವರು ಪ್ರಾಮಾಣಿಕವಾಗಿ ಹೇಳಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ. ಅಂದರೆ ಅದರ ಮತ್ತೊಂದು ಅರ್ಥ ತಾನು ಶೇ 99ರಷ್ಟು ಅಪ್ರಾಮಾಣಿಕ ಎಂದೇ ಆಗುತ್ತದೆ. ಪ್ರಾಮಾಣಿಕತನದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕೇ ವಿನಾ ಹೇಳಿಕೆ ನೀಡುವುದಕ್ಕೆ ಸೀಮಿತಗೊಳ್ಳಬಾರದು.

ಶೇ 99ರಷ್ಟು ಅಪ್ರಾಮಾಣಿಕತೆ ಇರುವವರನ್ನು ಜನರು ತಮ್ಮ ಸೇವೆಗಾಗಿ ಆರಿಸಿದ ಅಥವಾ ಆರಿಸುವ ದುರ್ದೈವ ಒದಗಿರುವುದು ದುರಂತವೇ ಹೌದು. ಪ್ರಾಮಾಣಿಕತನದ ಪ್ರಮಾಣಕ್ಕೆ ಒಂದು ಪರ್ಸೆಂಟ್ ಅಪ್ರಾಮಾಣಿಕತೆ ಸೇರಿದರೆ ಎಲ್ಲವೂ ಕೆಟ್ಟಂತೆ. ಕುಡಿವ ಹಾಲಿಗೆ ತೊಟ್ಟು ವಿಷ ಬೆರೆತರೂ ಸೇವಿಸಲು ಆಗದು. ಅಂತೆಯೇ ಇದು ಸಹ. ಸಚಿವರು ತಮ್ಮ ಪ್ರಾಮಾಣಿಕತೆಯನ್ನು ನೂರಕ್ಕೆ ನೂರರಷ್ಟು ಏರಿಸಿಕೊಳ್ಳಲಿ ಎಂಬುದಷ್ಟೇ ನಮ್ಮ ನಿರೀಕ್ಷೆ.
–ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT