ದಾಸ ಸಾಹಿತ್ಯದ ಪ್ರವರ್ತಕ, ನಾಡಿನ ಸಾಂಸ್ಕೃತಿಕ ಪರಂಪರೆಗೆ ವಿಶಿಷ್ಟ ಕೊಡುಗೆ ನೀಡಿದ ಮಹಾನ್ ತತ್ವಜ್ಞಾನಿ ವ್ಯಾಸರಾಜರ ವೃಂದಾವನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳನ್ನು ಬಂಧಿಸಿರುವ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ. ನಾಡಿನ ಐತಿಹಾಸಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಪರಂಪರೆಯ ತಾಣಗಳೊಂದಿಗೆ ಜನರು ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಈ ಮೂಲಕ ಅವರು ಪರಂಪರೆಯ ಮಹತ್ವವನ್ನು ನೆನೆಯತ್ತಾ ಅದನ್ನು ಉಳಿಸಿ ಬೆಳೆಸಿಕೊಂಡು ಬಂದಿರುತ್ತಾರೆ. ಇಂತಹ ತಾಣಗಳನ್ನು ನಿಧಿಗಾಗಿ ಅಥವಾ ಇನ್ನಾವುದೋ ಕಾರಣ ಕ್ಕಾಗಿ ಧ್ವಂಸ ಮಾಡುತ್ತಿರುವ ಪ್ರಕರಣಗಳು ಮರುಕಳಿಸದಂತೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.