ಕನ್ನಡ ಸಾಹಿತ್ಯ ಪರಿಷತ್ತಿಗೆ ಸರ್ಕಾರದ ಅನುದಾನ ಹೆಚ್ಚು ಹೆಚ್ಚು ಬರತೊಡಗಿದ ಮೇಲೆ ಕನ್ನಡದ ಕೆಲಸಕ್ಕಿಂತ ಸಮ್ಮೇಳನಗಳ ವೈಭವೀಕರಣ ಮಹತ್ವ ಪಡೆದಿದೆ. ಹಾಗಾಗಿ ಇದರ ಚುನಾವಣೆ ಮೇಲೆ ರಾಜಕಾರಣಿಗಳ ಹಸ್ತಕ್ಷೇಪ, ಜಾತಿ ಲೆಕ್ಕಾಚಾರ, ಹೆಚ್ಚು ಹಣ ಖರ್ಚು ಮಾಡುವವರು ಮಾತ್ರ ಚುನಾವಣೆಗೆ ನಿಲ್ಲುವ ಪರಿಸ್ಥಿತಿ ಉಂಟಾಗಿದೆ.
ಇತ್ತೀಚೆಗೆ ಕಸಾಪ ಸದಸ್ಯತ್ವ ಪಡೆಯುತ್ತಿರುವವರಲ್ಲಿ ಹೆಚ್ಚಿನವರಿಗೆ ಚುನಾವಣಾ ಉದ್ದೇಶ ಇರುತ್ತದೆಯೇ ವಿನಾ ಪರಿಷತ್ತಿನ ಮೇಲಿನ ಆಸಕ್ತಿಯಲ್ಲ. ಮಂಡ್ಯದ ಕುಗ್ರಾಮವೊಂದರಲ್ಲಿ 600ಕ್ಕೂ ಹೆಚ್ಚು ಮಂದಿ ಸದಸ್ಯತ್ವ ಪಡೆದುಕೊಂಡಿರುವುದು ಇದೇ ಕಾರಣಕ್ಕೆ. ಜಿಲ್ಲಾ ಅಧ್ಯಕ್ಷ ಅಭ್ಯರ್ಥಿ ಲಕ್ಷ ಲಕ್ಷ ಖರ್ಚು ಮಾಡುವ ಪರಿಸ್ಥಿತಿ ಎದುರಾಗಿದೆ ಎಂದರೆ, ಕೇಂದ್ರ ಅಧ್ಯಕ್ಷಗಿರಿ ಅಭ್ಯರ್ಥಿ ಇನ್ನೆಷ್ಟು ಖರ್ಚು ಮಾಡಬಹುದು ಎಂಬುದನ್ನು ಊಹಿಸಿಕೊಳ್ಳಬಹುದು.