ವಿಧಾನಸಭೆಯ ಅಧಿವೇಶನದಲ್ಲಿ ಸದಸ್ಯರು ರಸ್ತೆ ಉಬ್ಬುಗಳ ಬಗ್ಗೆ ಇತ್ತೀಚೆಗೆ ಅತ್ಯಂತ ಭಾವಾವೇಶದಿಂದ ಚರ್ಚಿಸಿದ್ದಾರೆ. ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಹೌದು, ವಾಹನಗಳನ್ನು ವೇಗವಾಗಿ ಓಡಿಸುವವರಿಗೆ ರಸ್ತೆ ಉಬ್ಬುಗಳು ತುಂಬಾ ಕಿರಿಕಿರಿ ಅನ್ನಿಸಬಹುದು. ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ಮತ್ತು ಇತರ ಮುಖ್ಯ ರಸ್ತೆಗಳಲ್ಲಿ ಓಡಿಸುವವರಿಗೆ ಇಂತಹ ಅನುಭವವಾಗಬಹುದು. ಆದರೆ ಇಂದು ಆ ಹೆದ್ದಾರಿಗಳು ಹಾಗೂ ಇತರ ರಸ್ತೆಗಳು, ನೂರಾರು ವರ್ಷಗಳಿಂದ ಆರಾಮವಾಗಿ ಉಸಿರಾಡುತ್ತಿದ್ದ ಸಾವಿರಾರು ಹಳ್ಳಿಗಳ ಹೃದಯ ಭಾಗಗಳನ್ನು ಸೀಳಿ, ಅವರು ಬಾಳಿ ಬದುಕುತ್ತಿದ್ದ ನೆಲವನ್ನು ಕಿತ್ತುಕೊಂಡು ಅನಾಥರನ್ನಾಗಿ ಮಾಡಿಟ್ಟಿವೆ. ಇದರ ಜೊತೆಗೆ ಸದಾ ವಾಹನಗಳ ಗದ್ದಲ, ಕರ್ಕಶ ಶಬ್ದಮಾಲಿನ್ಯ ಬೇರೆ. ಹಾಗೆಯೇ ಅವರು ತಮ್ಮದೇ ನೆಲ, ಗದ್ದೆ, ತೋಟಗಳಿಗೆ ಓಡಾಡಬೇಕಾದರೆ ರಸ್ತೆ ದಾಟಲುಎಂತೆಂಥ ಹಿಂಸೆಯನ್ನು ಅನುಭವಿಸಬೇಕಾಗಿದೆ. ಆಯಾ ಹಳ್ಳಿಗಳ ಅನನ್ಯ ಭಾಗವಾಗಿರುವ ಲೆಕ್ಕವಿಲ್ಲದಷ್ಟು ನಾಯಿಗಳು ಈ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ಸಿಲುಕಿ ಸಾಯುತ್ತಿರುತ್ತವೆ. ಕೆಲವೊಮ್ಮೆ ಬಡಪಾಯಿ ಮನುಷ್ಯರು ಕೂಡ.