ಕೇಂದ್ರ ಸಾಹಿತ್ಯ ಅಕಾಡೆಮಿಯು ಬೆಂಗಳೂರಿನ ಮೆಟ್ರೊ ರೈಲು ನಿಲ್ದಾಣದಲ್ಲಿ ಪುಸ್ತಕ ಮಳಿಗೆ ಸ್ಥಾಪಿಸಿರುವ ಸುದ್ದಿಯು ಸ್ವಾಗತಾರ್ಹವಾದದ್ದು. ಮೊಬೈಲ್ಗಳ ಹಾವಳಿಯಿಂದ ಪುಸ್ತಕ ಓದುವ, ಕೊಳ್ಳುವ ಹವ್ಯಾಸವೇ ಮರೆಯಾಗುತ್ತಿದೆ. ಬಹುತೇಕರು ಪುಸ್ತಕಗಳ ಓದಿನಿಂದ ವಂಚಿತರಾಗುತ್ತಿದ್ದಾರೆ. ಪುಸ್ತಕಗಳಿಗಾಗಿ ಮಳಿಗೆಗಳನ್ನು ಹುಡುಕಿಕೊಂಡು ಹೋಗುವಷ್ಟು ಸಮಯವೂ ಅನೇಕರಿಗೆ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಜನರಿಗೆ ತಮ್ಮ ಪ್ರಯಾಣದ ಸಂದರ್ಭದಲ್ಲಿ ಕಣ್ಣಳತೆಯಲ್ಲಿಯೇ ಪುಸ್ತಕಗಳು ದೊರೆಯುವಂತೆ ಆಗಿದ್ದು ತುಂಬಾ ಸಂತೋಷದ ಸಂಗತಿ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಪುಸ್ತಕಗಳೂ ಇಲ್ಲಿ ದೊರೆಯುವಂತಾದರೆ ಇನ್ನೂ ಒಳ್ಳೆಯದು.