ಇತ್ತೀಚಿನ ದಶಕಗಳಲ್ಲಿ, ನಮ್ಮನ್ನಾಳುತ್ತ ಬಂದಿರುವ ಎಲ್ಲ ಪಕ್ಷಗಳ ನೇತೃತ್ವದ ಸರ್ಕಾರಗಳೂ ಶಿಕ್ಷಣ ಕ್ಷೇತ್ರವನ್ನು ಮಾಫಿಯಾಗಳ ಕೈಗೊಪ್ಪಿಸಿ, ತಮ್ಮ ಹೊಣೆಗಾರಿಕೆಯಿಂದ ಪಲಾಯನ ಮಾಡುತ್ತ ಬಂದಿವೆ. ಇದರಿಂದಾಗಿ, ಇಂದು ಶಿಕ್ಷಣವು ಮೇಲ್ಮಧ್ಯಮ ವರ್ಗದವರ ಕೈಗೂ ಎಟಕುತ್ತಿಲ್ಲ. ಹೀಗಾಗಿ ತಂದೆ-ತಾಯಿ ದುಡಿದಿದ್ದರಲ್ಲಿ ಬಹುಪಾಲನ್ನೆಲ್ಲ ಮಗುವಿನ ಸ್ಕೂಲ್ ಸೀಟನ್ನು ಗಿಟ್ಟಿಸಿಕೊಳ್ಳುವುದಕ್ಕೇ ಸುರಿಯಬೇಕಾಗಿದೆ. ಆದರೆ, ಲಕ್ಷಗಟ್ಟಲೆ ಹಣ ಕೊಟ್ಟು ಶಾಲೆಗೆ ಸೇರಿಸಿದರೂ ಹೆಚ್ಚಿನ ಶಾಲೆಗಳಲ್ಲಿ ಬೋಧನೆ, ಕಲಿಕೆಯ ಗುಣಮಟ್ಟ ಪಾತಾಳ ಕಂಡಿವೆ. ಇದರ ಜತೆಗೆ, ಪೂರಾ ವ್ಯಾವಹಾರಿಕ ಆಗಿರುವ ಇದೇ ಶಿಕ್ಷಣ ವ್ಯವಸ್ಥೆಯು ಸಮಾಜದಲ್ಲಿ ಕಂದಕಗಳನ್ನು ಸೃಷ್ಟಿಸುತ್ತಿದೆ. ಇದು, ತಂತ್ರಜ್ಞಾನ ಸೃಷ್ಟಿಸುತ್ತಿರುವ ‘ಡಿಜಿಟಲ್ ಡಿವೈಡ್’ಗಿಂತಲೂ ಹೆಚ್ಚು ಅಪಾಯಕಾರಿ! ಸರ್ಕಾರಿ ಶಾಲೆಗಳನ್ನು ಉಳಿಸದಿದ್ದರೆ ಆರೋಗ್ಯಪೂರ್ಣ ಸಮಾಜವಂತೂ ಕನಸಿನ ಮಾತೇ ಸರಿ. ಆದ್ದರಿಂದ, ರಾಜ್ಯ ಸರ್ಕಾರವು ‘ನವ ಕರ್ನಾಟಕ’ ನಿರ್ಮಾಣದ ಘೋಷಣೆಯನ್ನು ನನಸಾಗಿಸಲು ಮೊದಲು ಸರ್ಕಾರಿ ಶಾಲೆಗಳನ್ನು ಉಳಿಸಿ, ಏಕರೂಪದ ಶಿಕ್ಷಣ ವ್ಯವಸ್ಥೆ ಯನ್ನು ತರಬೇಕಾಗಿದೆ.