ಯಾವುದೇ ಒಂದು ನುಡಿಸಮುದಾಯದಲ್ಲಿ ಎರಡು ಬಗೆಯ ವ್ಯಕ್ತಿಗಳು ತಮ್ಮ ನಿತ್ಯ ಜೀವನದ ಮಾತುಕತೆ
ಗಳಲ್ಲಿ ಹೆಚ್ಚಾಗಿ ಬೈಗುಳದ ನುಡಿಗಳನ್ನು ಬಳಸುತ್ತಾರೆ. ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ ಮತ್ತು ಆರೋಗ್ಯದಿಂದ ವಂಚಿತರಾಗಿರುವ ಬಡವರು ತಮ್ಮ ಮೈಮನದ ಆತಂಕ, ಹತಾಶೆ ಮತ್ತು ಸಂಕಟವನ್ನು ಹೊರಹಾಕಲು ಬೈಯುವಿಕೆಯಲ್ಲಿ ತೊಡಗುತ್ತಾರೆ. ಜಾತಿಬಲ, ಹಣಬಲ, ತೋಳ್ಬಲ ಮತ್ತು ಆಡಳಿತದ ಗದ್ದುಗೆಯ ಬಲವುಳ್ಳ ಸಿರಿವಂತರು ತಮ್ಮ ಆಸ್ತಿಪಾಸ್ತಿಗಳನ್ನು ಕಾಪಾಡಿಕೊಳ್ಳಲು ಮತ್ತು ಅಧಿಕಾರವು ತಮ್ಮಿಂದ ಕೈತಪ್ಪಿಹೋಗದಂತೆ ಉಳಿಸಿ ಕೊಳ್ಳಲು ತಾವು ಯಾರನ್ನು ಎದುರಾಳಿಗಳೆಂದು ಭಾವಿಸಿರುತ್ತಾರೆಯೋ ಅಂತಹವರ ತೇಜೋವಧೆ ಮಾಡಲು ಬೈಗುಳವನ್ನು ಬಳಸುತ್ತಾರೆ. ‘ಗೌಡ ಊರ ಮುಂದೆ ಬೈದರೆ, ತೋಟಿ ಒಲೆ ಮುಂದೆ ಬೈದ’ ಎಂಬ ಗಾದೆಯು ಬಡವರು ತಮ್ಮ ಕುಟುಂಬದ ನೆಲೆಯಲ್ಲಿ ಮತ್ತು ಉಳ್ಳವರು ಸಾರ್ವಜನಿಕ ರಂಗದಲ್ಲಿ ಬೈಯುವಿಕೆಯಲ್ಲಿ ತೊಡಗಿರುವುದನ್ನು ಸೂಚಿಸುತ್ತದೆ.