ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರಲ್ಲಿ ಶೇ 10ರಷ್ಟು ಮಾತ್ರ ಮಹಿಳೆಯರಿದ್ದರು (ಪ್ರ.ವಾ., ಮೇ 23). ಸರಿಸುಮಾರು ಶೇ 50ರಷ್ಟು ಮಹಿಳಾ ಜನಸಂಖ್ಯೆಯಿರುವ ಭಾರತದಲ್ಲಿ ಕೆಲವೇ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದ್ದು ನಾಚಿಕೆಗೇಡಿನ ಸಂಗತಿ. ಅದರಲ್ಲೂ, ಹೀಗೆ ಅವಕಾಶ ಸಿಕ್ಕವರ ಪೈಕಿ ಶೇ 15ರಷ್ಟು ಉಮೇದುವಾರರು ಅಪರಾಧ ಹಿನ್ನೆಲೆ ಉಳ್ಳವರು. ಹಣಬಲ, ತೋಳ್ಬಲ, ಜಾತಿ–ಧರ್ಮದ ಬಲ ಇಲ್ಲದ ಅರ್ಹ ಮಹಿಳೆಯರಿಗೆ ಅವಕಾಶಗಳು ಸಿಗುತ್ತಿಲ್ಲ ಎಂಬುದು ಇದರಿಂದ ಅರ್ಥವಾಗುತ್ತದೆ.
ಸ್ವಾತಂತ್ರ್ಯ ಬಂದುಏಳು ದಶಕಗಳೇ ಕಳೆದರೂ ರಾಜಕೀಯ ಪಕ್ಷಗಳು ಮಹಿಳೆಯರನ್ನು ಇನ್ನೂ ಎರಡನೆಯ ದರ್ಜೆ ನಾಗರಿಕರಂತೆ ಕಾಣುತ್ತಿರುವುದು, ಅಭಿವೃದ್ಧಿಯಲ್ಲಿ ಮಹಿಳೆಯರ ಪಾಲುದಾರಿಕೆಯನ್ನು ಕಡೆಗಣಿಸುತ್ತಿರುವುದು ಬಟಾಬಯಲಾಗಿದೆ. ದೇಶದಲ್ಲಿ ಕೌಟುಂಬಿಕ, ಸಾಮಾಜಿಕ, ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ, ಜನರ ಸೇವೆಗೆ ಜೀವನವನ್ನು ಮುಡಿಪಾಗಿಟ್ಟಿರುವ ಹಲವು ಮಹಿಳೆಯರು ನಮ್ಮ ನಡುವೆ ಇದ್ದಾರೆ. ಅಂತಹವರಿಗೆ ಪಕ್ಷಗಳು ಜಾತಿ, ಧರ್ಮ, ಅಂತಸ್ತಿನ ಹಂಗಿಲ್ಲದೆ ರಾಜಕೀಯ ಅಧಿಕಾರ ನೀಡಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ. ದೇಶವೂ ಉದ್ಧಾರವಾಗುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.