ಗೆಜೆಟೆಡ್ ಪ್ರೊಬೇಷನರಿ ಹುದ್ದೆಯ ಆಯ್ಕೆಯಲ್ಲಿ, ಕೆಪಿಎಸ್ಸಿ ಅಕ್ರಮವೆಸಗಿರುವುದು ಬಹಿರಂಗವಾದ ಹಿನ್ನೆಲೆಯಲ್ಲಿ, ಕೆಪಿಎಸ್ಸಿ ಸಿದ್ಧಪಡಿಸಿದ್ದ ಆಯ್ಕೆ ಪಟ್ಟಿಯನ್ನು ಸರ್ಕಾರ ರದ್ದುಪಡಿಸಿ ಮರುಪರೀಕ್ಷೆ ಮತ್ತು ಮರು ಮೌಲ್ಯಮಾಪನಕ್ಕೆ ಆದೇಶಿಸಿದೆ. ಪ್ರಸ್ತುತ ಕೆಪಿಎಸ್ಸಿ ತನ್ನದು ಸಾಂವಿಧಾನಿಕ ಸಂಸ್ಥೆ, ಸರ್ಕಾರಕ್ಕೆ ಆದೇಶ ನೀಡುವ ಅಧಿಕಾರವಿಲ್ಲ ಎಂದು ಸಮಜಾಯಿಷಿ ನೀಡುತ್ತಿದೆ.
ಯಾವುದೇ ಸಾಂವಿಧಾನಿಕ ಸಂಸ್ಥೆಯ ಅಧಿಕಾರವನ್ನು ಸರ್ಕಾರ ಮೊಟಕುಗೊಳಿಸುವಂತಿಲ್ಲ ಎಂಬುದು ವಾಸ್ತವ. ಅಂದಮಾತ್ರಕ್ಕೆ ಅಕ್ರಮ ಎಸಗಬಹುದೇ? ಸಂವಿಧಾನದ ೩೧೫ರಿಂದ ೩೨೩ರವರೆಗಿನ ಕಲಂ ಯುಪಿಎಸ್ಸಿ ಮತ್ತು ಕೆಪಿಎಸ್ಸಿಗಳಿಗೆ ಸಾಂವಿಧಾನಿಕ ಸ್ಥಾನಮಾನ ನೀಡಿದ್ದರೂ, ಅದೇ ಕಲಂಗಳಲ್ಲಿ ನಿರ್ಬಂಧಗಳನ್ನು ವಿಧಿಸಿದೆ. ಉದಾ: ೩೨೦(ಡಿ). ಸರ್ಕಾರದ ಆದೇಶ ಪಾಲನೆ, ೨೬೩ನೇ ಕಲಂ ಅನ್ವಯ ರಾಜ್ಯಪಾಲರ ಆದೇಶದ ಅಧಿಕಾರ, ೩೧೮(ಎ) ರಾಜ್ಯಪಾಲರಿಗೆ ಜವಾಬ್ದಾರಿ, ೩೨೧(೧) ಕಾರ್ಯಾಧಿಕಾರಗಳ ಮುಂದುವರಿಕೆಗೆ, ಶಾಸಕಾಂಗದ ಅಧಿಕಾರ. ಈ ಮೇಲಿನ ಪ್ರತಿಬಂಧಕಗಳನ್ನು ಮೀರುವ ಅಧಿಕಾರ ಕೆಪಿಎಸ್ಸಿಗೆ ಇರುವುದಿಲ್ಲ.
ಈ ಸಂಸ್ಥೆಗಳು ದೋಷಿಯೆಂದಾದಲ್ಲಿ, ಶಾಸಕಾಂಗ ಮತ್ತು ಕಾರ್ಯಾಂಗಗಳು ಅವುಗಳನ್ನು ಪ್ರಶ್ನಿಸುವ, ಪರಾಮರ್ಶಿಸುವ ಹಾಗೂ ರಾಜ್ಯಪಾಲರ ಮುಖೇನ ನಿರ್ದೇಶಿಸುವ ಹಕ್ಕು ಇರುತ್ತದೆ. ರಾಜ್ಯಪಾಲರು ಈ ಸಂಬಂಧ ರಾಜ್ಯ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಸಲಹೆ ಪಡೆದು ಕ್ರಮ ಜರುಗಿಸಬಹುದು.
ಸಾಂವಿಧಾನಿಕ ಸಂಸ್ಥೆ ಅಕ್ರಮದಲ್ಲಿ ಭಾಗಿಯಾದಾಗ, ತಮ್ಮ ಸಾಂವಿಧಾನಿಕ ರಕ್ಷಣೆಗಳಿಂದ ವಂಚಿತವಾಗುತ್ತದೆ. ಜೊತೆಗೆ ಸರ್ಕಾರಕ್ಕೆ ಮಾತ್ರ ಪರಮಾಧಿಕಾರವಿದೆ.