ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ: ಹಳ್ಳಿಯಿಂದ ದಿಲ್ಲಿವರೆಗೆ ಬೆಳೆದ ಧೀಮಂತ

Last Updated 17 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಅದು 1980ರ ಸಮಯ. ಆ ವರ್ಷಲೋಕಸಭಾ ಚುನಾವಣೆ ನಡೆದು ಇಂದಿರಾಗಾಂಧಿ ಮತ್ತೆ ಪ್ರಧಾನಿ ಹುದ್ದೆ ಅಲಂಕರಿಸಿದ ಸಂಜೆಯೊಳಗೆ ರಾಜ್ಯದಲ್ಲಿ ಪಕ್ಷಾಂತರ ಪರ್ವ ನಡೆಯಿತು. 80 ಶಾಸಕರು ಮುಖ್ಯಮಂತ್ರಿಯಾಗಿದ್ದ ದಿವಂಗತ ಡಿ. ದೇವರಾಜ‌ ಅರಸು‌ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಪಕ್ಷ ತೊರೆದು ಇಂದಿರಾಗಾಂಧಿ ಅವರ ರಾಷ್ಟ್ರೀಯ ಕಾಂಗ್ರೆಸ್ (ಐ) ಪಕ್ಷಕ್ಕೆ ಸೇರಿದರು. ಬಹುಮತ ಕಳೆದುಕೊಂಡ ಅರಸು ಸರ್ಕಾರ ಪತನಗೊಂಡು ಇಂದಿರಾ ಅವರ‌ ಪುತ್ರ ಸಂಜಯ್‌ ಗಾಂಧಿ ಅವರ ಅಂತರಂಗದ ಗೆಳೆಯ ಆರ್.ಗುಂಡೂರಾವ್ ಮುಖ್ಯಮಂತ್ರಿಯಾದರು.

ಆಗ ಹಿಂದುಳಿದ ವರ್ಗಗಳ ನಾಯಕರೂ, ಸಮಾಜವಾದಿ ಧುರೀಣರೂ ಆಗಿದ್ದ ಎಸ್‌. ಬಂಗಾರಪ್ಪ ಮತ್ತು ಎಂ. ವೀರಪ್ಪ ಮೊಯಿಲಿ ಅವರು ಗುಂಡೂರಾವ್ ಸರ್ಕಾರದಲ್ಲಿ ಸಚಿವರಾದರು. ಅಂದಿನ ಕಾಲಕ್ಕೆ ರಾಜ್ಯದಲ್ಲಿ ಲಿಕ್ಕರ್ ಲಾಬಿ ರಾಜಕಾರಣವನ್ನು‌ ನಿಯಂತ್ರಿಸುವಷ್ಟು ಶಕ್ತವಾಗಿತ್ತು.‌

ಅರಸು ಅವರು ರಾಜ್ಯ ರಾಜಕಾರಣದಲ್ಲಿ ಯಾರೂ ಅಷ್ಟಾಗಿ ಹೆಸರು ಕೇಳಿರದ‌ ಆರ್.ಎಲ್. ಜಾಲಪ್ಪ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿದರು. ಇದು ಆ ಕಾಲಕ್ಕೆ ಅನೇಕರ ಹುಬ್ಬೇರಿಸಿತು. ಜಾಲಪ್ಪ ಪರಿಷತ್ತಿನ ಸದಸ್ಯರಾಗುವ ಪೂರ್ವದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿದ್ದರು. ಬಹಳ ಕಾಲ ಆ ಹುದ್ದೆ ಅಲಂಕರಿಸಿದ್ದ ದೊಡ್ಡಬಳ್ಳಾಪುರದ‌ ಜಿ. ರಾಮೇಗೌಡ ಅವರು 1975ರಲ್ಲಿ ಸಚಿವರಾದಾಗ ಆ ಸ್ಥಾನವನ್ನು ತಮ್ಮ ರಾಜಕೀಯ ಶಿಷ್ಯ ಜಾಲಪ್ಪ ಅವರಿಗೆ ಬಿಟ್ಟುಕೊಟ್ಟರು. ಅಲ್ಲಿಯವರೆಗೆ ‌ದೊಡ್ಡಬಳ್ಳಾಪುರಕ್ಕೆ‌ ಸೀಮಿತವಾಗಿದ್ದ‌ ಜಾಲಪ್ಪ ಅವರ ರಾಜಕೀಯ ಚಟುವಟಿಕೆ ರಾಜ್ಯದ ರಾಜಧಾನಿವರೆಗೆ ವಿಸ್ತರಿಸಿತು.

ಜಾಲಪ್ಪ ಅವರ ತಂದೆಯ ಮೂಲ ಬೆಂಗಳೂರು ಉತ್ತರ ತಾಲ್ಲೂಕಿನ ರಾಜಾನುಕುಂಟೆ. ತಂದೆಯ ಕಾಲಕ್ಕೆ ಅವರು ರಾಜಾನುಕುಂಟೆ ತೊರೆದು ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆಗೆ ವಲಸೆ ಬಂದು ಬದುಕು ರೂಪಿಸಿಕೊಂಡರು. ಪ್ರಾಥಮಿಕ ವಿದ್ಯಾಭ್ಯಾಸ ರಾಜಾನುಕುಂಟೆ, ಬಿ.ಎ. ಪದವಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಡೆಯಿತು. ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಮಹಾರಾಜ ಕಾಲೇಜಿನಲ್ಲಿ ಅವರ ಒಡನಾಡಿಯಾಗಿದ್ದರು.

ಮೂಲತಃ ಎಡಪಂಥೀಯ ವಿಚಾರಗಳನ್ನು ಹೊಂದಿದ್ದ ಜಾಲಪ್ಪ ಅಂದಿನ ಕಾಲಕ್ಕೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಗೇಣಿದಾರ ರೈತರ ಪರವಾಗಿ ಹೋರಾಟ ಮಾಡುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರ, ಸಿಪಿಎಂ ಮುಖಂಡ ಎಚ್‌. ಮುಗುವಾಳಪ್ಪ ಅವರ ಅನುಯಾಯಿಯಾಗಿದ್ದರು. ಯೌವನದ ದಿನಗಳಲ್ಲಿ ಕಮ್ಯೂನಿಸ್ಟ್‌ ಪಕ್ಷದ ಸದಸ್ಯರಾಗಿದ್ದರು.

1958ರಲ್ಲಿ ನಡೆದ ತಾಲ್ಲೂಕು ಬೋರ್ಡ್ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ತೂಬಗೆರೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. 1962ರ ಸಾರ್ವತ್ರಿಕ ಚುನಾವಣೆ ವೇಳೆಗೆ ಅವರು ಜಿ. ರಾಮೇಗೌಡರ ಅನುಯಾಯಿಯಾಗಿ ಕಾಂಗ್ರೆಸ್ ಸೇರಿದರು.

ಬಳಿಕ ದೊಡ್ಡಬಳ್ಳಾಪುರ ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗಿ, ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್‌, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾಗಿ ಕೆಲಸ ಮಾಡಿ ಹಂತ ಹಂತವಾಗಿ ರಾಜಕೀಯದ ಮೆಟ್ಟಿಲು ಏರಿ ಮೇಲ್ಮನೆಯ ಸದಸ್ಯರಾದರು. ಅಲ್ಲಿಂದ ಅವರು ರಾಜಕಾರಣದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ.

1983ರ ವೇಳೆಗೆ ಗುಂಡೂರಾವ್ ಸರ್ಕಾರ ಜನಪ್ರಿಯತೆ ಕಳೆದುಕೊಂಡಿತ್ತು; ಮಾತ್ರವಲ್ಲ ಆ ಚುನಾವಣೆಯಲ್ಲಿ ಸ್ವತಃ ಗುಂಡೂರಾವ್ ಸೋಲು ಕಂಡರು. ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಂಗ್ರೆಸೇತರ ಸರ್ಕಾರ ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿತು. ವಯಸ್ಸು ಮತ್ತು ಇತರೆ ಕಾರಣದಿಂದ ಜಿ. ರಾಮೇಗೌಡರು‌ ರಾಜಕೀಯ ನಿವೃತ್ತಿ ಹೊಂದಲು‌‌ ಬಯಸಿದ್ದರು. ಆಗಲೇ ಅವರು ಜಾಲಪ್ಪ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದರು. ಇದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಜಾಲಪ್ಪ ಪ್ರವೇಶ ಪಡೆಯಲು ನೆರವಾಯಿತು. ‌ಚುನಾವಣೆಯಲ್ಲಿ ಗೆದ್ದು ಹೆಗಡೆಯವರ ಸರ್ಕಾರದಲ್ಲಿ ಸಹಕಾರ ಸಚಿವರಾದರು. ಅಲ್ಲಿಂದ ಪ್ರಾರಂಭವಾದ ಅವರ ರಾಜಕೀಯ ಪಯಣ 2004ರವರೆಗೆ ಮುಂದುವರಿಯಿತು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ 1984ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಸೋಲುಂಡರು. 1991ರ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಅವರು ಮತ್ತೆ ಪರಾಭವಗೊಂಡರು. 1996ರಲ್ಲಿ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾದ ಅವರು, ಎಚ್‌.ಡಿ. ದೇವೇಗೌಡ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಜವಳಿ ಸಚಿವರಾದರು.

ಮುಂದೆ ಐ.ಕೆ. ಗುಜ್ರಾಲ್ ಸರ್ಕಾರದಲ್ಲಿಯೂ ಸಚಿವರಾಗಿ ಮುಂದುವರಿದರು. 1998ರಲ್ಲಿ ಜನತಾದಳ ತೊರೆದು ಕಾಂಗ್ರೆಸ್ ಸೇರಿದ ಜಾಲಪ್ಪ ಮೂರು ಬಾರಿ (1998, 1999 ಮತ್ತು 2004) ಕಾಂಗ್ರೆಸ್‌ನಿಂದ ಲೋಕಸಭೆಗೆ ಆಯ್ಕೆಯಾದರು.

ಅವರ ರಾಜಕೀಯ ಜೀವನ ಅಷ್ಟೇನೂ ಏರುಪೇರು ಕಾಣದಿದ್ದರೂ ಅವರು ಗೃಹ ಸಚಿವರಾಗಿದ್ದ ಅವಧಿಯಲ್ಲಿಯೇ ದೇವರಾಜ ಅರಸು‌ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ ಒಂದು ಘಟನೆ ನಡೆಯದೇ ಇದ್ದಿದ್ದರೆ ರಾಮಕೃಷ್ಣ ಹೆಗಡೆ ನಂತರ ಕರ್ನಾಟಕದ‌ ಮುಖ್ಯಮಂತ್ರಿಯಾಗುವ‌ ಎಲ್ಲಾ ಅವಕಾಶ ಅವರಿಗಿತ್ತು. ಆ ಘಟನೆ ಅವರ ರಾಜಕೀಯ ಬದುಕಿನ ಒಂದು ಕಪ್ಪುಚುಕ್ಕೆಯಾಗಿ ಅವರ ಉಜ್ವಲ ಭವಿಷ್ಯವನ್ನು ಮುಸುಕು ಮಾಡಿತು.

(ಲೇಖಕರು ನಿವೃತ್ತ ಕನ್ನಡ ಪ್ರಾಧ್ಯಾಪಕ, ಕೊಂಗಾಡಿಯಪ್ಪ ಪದವಿ ಕಾಲೇಜು, ದೊಡ್ಡಬಳ್ಳಾಪುರ)

ಕುಟುಂಬದ ಸದಸ್ಯರೊಟ್ಟಿಗೆ ಜನ್ಮ ದಿನ ಆಚರಿಸಿಕೊಳ್ಳುತ್ತಿರುವ ಆರ್‌.ಎಲ್‌. ಜಾಲಪ್ಪ
ಕುಟುಂಬದ ಸದಸ್ಯರೊಟ್ಟಿಗೆ ಜನ್ಮ ದಿನ ಆಚರಿಸಿಕೊಳ್ಳುತ್ತಿರುವ ಆರ್‌.ಎಲ್‌. ಜಾಲಪ್ಪ

ರಾಜಕೀಯ ಹೆಜ್ಜೆಗುರುತು
ಇಂದಿನ ರಾಜಕಾರಣ ಜಾತಿ, ಹಣ ಮತ್ತು ತೋಳ್ಬಲದ ಮೇಲೆ ನಿಂತಿರುವುದು ಗುಟ್ಟೇನಲ್ಲ. ಇವುಗಳ ಬೆಂಬಲ ಇಲ್ಲದೆ ರಾಜಕೀಯದ ಹಾದಿಯಲ್ಲಿ ಸಾಗುವುದು ಕಷ್ಟಕರ. ಜಾಲಪ್ಪ ಅವರು ಇದ್ಯಾವುದರ ಬೆಂಬಲ ಇಲ್ಲದೆಯೇ ಸಾಧನೆ ಮಾಡಿದ್ದು ಅವರ ಸಂಘಟನಾ ಚತುರತೆಗೆ ಸಾಕ್ಷಿಯಾಗಿದೆ.

ಅವರ ಜಾತಿಯ (ಈಡಿಗ) ಮತಗಳು ಅವರು ಪ್ರತಿನಿಧಿಸಿದ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಲ್ಪ. ಆದರೆ, ಜಾಲಪ್ಪ ಅವರ ಜನಪರ ಕಾಳಜಿ, ಸಹಕಾರ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯೇ ಅವರ ರಾಜಕೀಯ ಕ್ಷೇತ್ರದಲ್ಲಿನ ಯಶಸ್ಸಿಗೆ ಭದ್ರ ಬುನಾದಿಯಾಯಿತು.

ಜಾಲಪ್ಪ ಅವರು 1980ರಿಂದ 1983ರವರೆಗೆ ವಿಧಾನ ಪರಿಷತ್‌ ಸದಸ್ಯರಾಗಿದ್ದರು. 1983, 1985, 1989 ಮತ್ತು 1994ರ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. 1983-1984ರವರೆಗೆ ಮತ್ತು 1985-86ರವರೆಗೆ ಸಹಕಾರ, 1986-87ರಲ್ಲಿ ಗೃಹ ಮತ್ತು 1995-96ರಲ್ಲಿ ಕಂದಾಯ ಸಚಿವರಾಗಿದ್ದರು.

ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಸಹಕಾರ ಸಚಿವರಾಗಿ ರೈತರ ಸುಸ್ತಿ ಸಾಲದ ಬಡ್ಡಿ ಮನ್ನಾ, ಸಹಕಾರ ಸಂಘಗಳಲ್ಲಿ ಮಹಿಳೆಯರು ಮತ್ತು ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಕಲ್ಪಿಸಿದರು.

ಜಾಲಪ್ಪ ಸಚಿವರಾಗಿದ್ದ ವೇಳೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ ಆರ್ಯ ಈಡಿಗ ಮಹಾ ಸಂಸ್ಥಾನಕ್ಕಾಗಿ 14 ಎಕರೆ ಜಾಗವನ್ನು ಮಂಜೂರು ಮಾಡಿಸಿದ್ದರು. ಅಲ್ಲಿ ಸ್ಥಾಪಿಸಿರುವ ಬ್ರಹ್ಮಶ್ರೀನಾರಾಯಣಗುರು ವಿದ್ಯಾಸಂಸ್ಥೆಯ ಕಟ್ಟಡದಲ್ಲಿ ಆರ್.ಎಲ್.ಜಾಲಪ್ಪ ಅಕಾಡೆಮಿ ಆರಂಭವಾಗಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ.

ಕೇರಳದ ವಕೀಲ ಎಂ.ಎ. ರಶೀದ್‌ ಕೊಲೆ ಪ್ರಕರಣದಲ್ಲಿ ಜಾಲಪ್ಪರ ಹೆಸರು ತಳುಕು ಹಾಕಿಕೊಂಡಿತ್ತು. ಆಗ ರಾಮಕೃಷ್ಣ ಹೆಗಡೆಅವರ ಸಂಪುಟದಲ್ಲಿ ಅವರು ಗೃಹಸಚಿವರಾಗಿದ್ದರು. ದೇವರಾಜ ಅರಸು ವೈದ್ಯಕೀಯ ಕಾಲೇಜು ವಿವಾದದ ವಿಚಾರವಾಗಿ ರಶೀದ್‌ ಅವರನ್ನು ಜಾಲಪ್ಪ ಅವರೇ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಯಿತು.

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ನಂತರ ಜಾಲಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರೀಕ್ಷಣಾ ಜಾಮೀನು ಪಡೆದರು. ಸುಮಾರು 14 ವರ್ಷ ಪ್ರಕರಣದ ವಿಚಾರಣೆ ನಡೆದು ನ್ಯಾಯಾಲಯವು ಜಾಲಪ್ಪ ಅವರನ್ನು ನಿರ್ದೋಷಿ ಎಂದು ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT