ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕು ತತ್ವಕ್ಕೆ ವಿರುದ್ಧವಾದುದು

Last Updated 18 ಡಿಸೆಂಬರ್ 2015, 20:02 IST
ಅಕ್ಷರ ಗಾತ್ರ

ಈಗಿರುವ ಬಾಲನ್ಯಾಯ ಕಾಯ್ದೆ– 2000ಕ್ಕೆ ತಿದ್ದುಪಡಿ ತರುವ ಮಸೂದೆಯ ಅಂಗೀಕಾರಕ್ಕೆ ಕೇಂದ್ರ ಸರ್ಕಾರ ಯತ್ನಿಸುತ್ತಿರುವುದು ನಿಜಕ್ಕೂ  ನಾವು ಒಪ್ಪಿಕೊಂಡಿರುವ ಮಾನವ ಹಕ್ಕುಗಳ ತತ್ವಕ್ಕೆ ಅಸಮಂಜಸ ಎನಿಸುವಂತಿದೆ.  

ಈಗಿನ ತಿದ್ದುಪಡಿಯ ಪ್ರಕಾರ ಅತ್ಯಾಚಾರ, ಕೊಲೆ ಅಥವಾ ಇನ್ನಾವುದೇ ಹೇಯ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾದ ಆರೋಪಿ ಬಾಲಕರನ್ನು ವಯಸ್ಕರ ನ್ಯಾಯಾಲಯಗಳಲ್ಲೇ ವಿಚಾರಣೆಗೆ ಒಳಪಡಿಸಬೇಕು ಎಂಬುದು ಬಾಲನ್ಯಾಯ ಪದ್ಧತಿಯ ಸ್ವರೂಪವನ್ನೇ ನಾಶ ಮಾಡಿಬಿಡುವ ಸಾಧ್ಯತೆಗೆ ತಿದಿ ಒತ್ತಿದಂತಿದೆ.

ಉದ್ದೇಶಿತ ತಿದ್ದುಪಡಿ ಮಸೂದೆ  ಸಂವಿಧಾನದ 14ನೇ ವಿಧಿಗೆ ಸಂಪೂರ್ಣ ತದ್ವಿರುದ್ಧವಾಗಿದೆ. ಈ ತಿದ್ದುಪಡಿ ಮಸೂದೆಯಲ್ಲಿ ಒಬ್ಬ ಬಾಲಕನನ್ನು ಹೇಗೆ ವಯಸ್ಕರ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಲ್ಲ. ಇದರ ಪರಿಣಾಮ ಏನಾಗಬಲ್ಲದು ಎಂದರೆ, ವಯಸ್ಕರ ನ್ಯಾಯಾಲಯಗಳು ಬಾಲ ಆರೋಪಿಗಳಿಗೆ ಜಾಮೀನು ನಿರಾಕರಣೆ ಮಾಡಿ  ಸುದೀರ್ಘ ಸೆರೆವಾಸ ವಿಧಿಸಿಬಿಡುವ ಸಂದರ್ಭಗಳು ಸಾಕಷ್ಟಿರುತ್ತವೆ.  ಇದರಿಂದ  ಬಾಲಕರ ಪುನರ್ವಸತಿ ಹಾಗೂ ಬಾಲನ್ಯಾಯ ಪದ್ಧತಿಯ ತತ್ವಕ್ಕೇ ನಾವು ಎಳ್ಳುನೀರು ಬಿಟ್ಟಂತಾಗುತ್ತದೆ.
ಈ ತಿದ್ದುಪಡಿ ಮಸೂದೆಯು ನಿರ್ಭಯಾ ಅತ್ಯಾಚಾರ ಪ್ರಕರಣದಿಂದಾಗಿ ಹೊರಹೊಮ್ಮಿರುವ  ಒಂದು ಭಾವನಾತ್ಮಕ ಹಾಗೂ ತತ್‌ಕ್ಷಣದ ಪ್ರತಿಕ್ರಿಯೆಯಾಗಿಯೇ ನಮಗೆ ಕಾಣಬರುತ್ತಿದೆ.  

ಈ ಹಿನ್ನೆಲೆಯಲ್ಲಿ, ನಾವು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಕೈಗೊಂಡಿರುವ ನಿರ್ಣಯಗಳ ಜೊತೆಗೆ ಇತರ ಅನೇಕ ಅಂತರ ರಾಷ್ಟ್ರೀಯ ಮಟ್ಟದ ನಿರ್ಣಯಗಳನ್ನು ಗಮನಿಸಬೇಕು. ಈ ನಿರ್ಣಯಗಳ ಪ್ರಕಾರ, ಬಾಲನ್ಯಾಯ ವಿಚಾರಣೆಯ ವಯೋಮಿತಿ 18 ವರ್ಷವೇ ಇರಬೇಕೆಂದು ಒಪ್ಪಿಕೊಳ್ಳಲಾಗಿದೆ. ಆದರೆ ನಮ್ಮ ಈಗಿನ ತಿದ್ದುಪಡಿ ಬಾಲನ್ಯಾಯ ಕಾಯ್ದೆಗೆ ಸಂಬಂಧಿಸಿದ 1986ರ ನಮ್ಮ ಶಾಸನಕ್ಕೂ  ವಿರುದ್ಧ ಎನಿಸಿದೆ. ಹಾಗಾಗಿ ನಾವಿದನ್ನು ಗಂಭೀರವಾಗಿ ಪರಿಗಣಿಸಬೇಕು. 

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಿತಿ ಯಾಕೆ 18ರ ವಯೋಮಿತಿಯನ್ನು 16ಕ್ಕೆ ಇಳಿಸುವುದಕ್ಕೆ ಇನ್ನಿಲ್ಲದ ಕಳವಳ ವ್ಯಕ್ತಪಡಿಸಿದೆ ಎಂಬುದನ್ನೂ ಅರಿಯಬೇಕು. ಆದ್ದರಿಂದಲೇ  ವಿಶ್ವಸಂಸ್ಥೆಯ ನಿಯಮಗಳನ್ನು ಈ ಸಂದರ್ಭದಲ್ಲಿ ಪುನರ್ಮನನ ಮಾಡಬೇಕು. 

ಇತ್ತೀಚೆಗೆ ಸುಪ್ರೀಂಕೋರ್ಟ್‌   ನೀಡಿರುವ ಸಲೀಲ್‌ ಬಾಲಿ ವರ್ಸಸ್‌ ಕೇಂದ್ರ ಸರ್ಕಾರ ಹಾಗೂ ಡಾ. ಸುಬ್ರಮಣಿಯನ್‌ ಸ್ವಾಮಿ ಹಾಗೂ ಇತರರು ವರ್ಸಸ್‌ ವಿ.ರಾಜು ಪ್ರಕರಣದ ತೀರ್ಪುಗಳಲ್ಲಿ 18 ವರ್ಷದ ಬಗ್ಗೆ ನೀಡಿರುವ ವ್ಯಾಖ್ಯಾನವನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಮಕ್ಕಳ ಮಾನಸಿಕ ಸ್ಥಿತಿ ಮತ್ತು ಅವರ ವರ್ತನೆಗಳನ್ನು ಅವಲಂಬಿಸಿಯೇ ನಾವು ಪ್ರತಿಯೊಂದನ್ನೂ ನಿರ್ಧರಿಸಬೇಕು.  ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಮಕ್ಕಳನ್ನು ಸುಧಾರಣೆ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆತರುವುದೇ ನಮ್ಮ  ಧ್ಯೇಯವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT