ನವದೆಹಲಿ (ಪಿಟಿಐ): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಪ್ರಶಸ್ತಿ ಜಯಿಸುವ ಕನಸು. ಬಹುತೇಕ ತಮ್ಮ ವೃತ್ತಿಜೀವನದ ಕೊನೆಯ ಟೂರ್ನಿಯಲ್ಲಿ ಮಿಂಚುವ ಹುಮ್ಮಸ್ಸು ಮಹೇಂದ್ರಸಿಂಗ್ ಧೋನಿಗೆ. ಅತ್ಯಂತ ಯಶಸ್ವಿ ನಾಯಕನೆಂಬ ಹೆಗ್ಗಳಿಕೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಅಲಂಕರಿಸುವ ಉತ್ಸಾಹ ರೋಹಿತ್ ಶರ್ಮಾಗೆ. ಶುಕ್ರವಾರ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಹತ್ತು ತಂಡಗಳ ಆಟಗಾರರಿಗೆ ಇಂತಹ ಹತ್ತಾರು ಕನಸುಗಳಿವೆ. ಧೋನಿ, ಕೊಹ್ಲಿ ಮತ್ತು ರೋಹಿತ್ ಅವರು ಕಳೆದ 15 ಆವೃತ್ತಿಗಳಲ್ಲಿ ತಮ್ಮ ಆಟದ ಮೂಲಕ ಟೂರ್ನಿಯನ್ನು ಶ್ರೀಮಂತಗೊಳಿಸಿದ್ದಾರೆ. ಕ್ರಿಕೆಟ್ ಮತ್ತು ಮನರಂಜನೆಯ ಸಮ್ಮಿಶ್ರ ಪಾಕವಾಗಿರುವ ಟೂರ್ನಿಯಲ್ಲಿ ಈ ಬಾರಿ ಕೆಲವು ಹೊಸ ಪ್ರತಿಭೆಗಳು ಕಣಕ್ಕಿಳಿಯಲಿವೆ. ಕೆಲವು ಪ್ರಮುಖರು ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದಾರೆ. ಆಟದ ರೋಚಕತೆ ಹೆಚ್ಚಿಸುವ ಕೆಲವು ಹೊಸ ನಿಯಮಗಳೂ ಜಾರಿಯಾಗುತ್ತಿವೆ.