ನವದೆಹಲಿ: ತಾವು ಮತ್ತು ತಮ್ಮ ಕುಟುಂಬಕ್ಕೆ ಭಯೋತ್ಪಾದಕ ಸಂಘಟನೆ ‘ಐಸಿಸ್ ಕಾಶ್ಮೀರ’ದಿಂದ ಕೊಲೆ ಬೆದರಿಕೆ ಬಂದಿದೆ ಎಂದು ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಗಂಭೀರ್ ಅವರ ಪೂರ್ವ ದೆಹಲಿಯ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
‘ಐಸಿಸ್ ಕಾಶ್ಮೀರದಿಂದ ಗೌತಮ್ ಗಂಭೀರ್ ಅವರಿಗೆ ಇಮೇಲ್ ಮೂಲಕ ಕೊಲೆ ಬೆದರಿಕೆ ಬಂದಿದ್ದು, ಅವರ ನಿವಾಸದ ಸುತ್ತ ಭದ್ರತೆ ಹೆಚ್ಚಿಸಲಾಗಿದೆ’ಎಂದು ಪೊಲೀಸ್ ಅಧಿಕಾರ ಶ್ವೇತಾ ಚೌಹಾಣ್ ತಿಳಿಸಿದ್ಧಾರೆ.
ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ನನ್ನ ‘ದೊಡ್ಡಣ್ಣ’ ಇದ್ದಂತೆ ಎಂದಿರುವ ಪಂಜಾಬ್ನ ಕಾಂಗ್ರೆಸ್ ಮುಖಂಡ ನವಜೋತ್ ಸಿಧು ಹೇಳಿಕೆ ನಾಚಿಕೆಗೇಡಿನ ವಿಚಾರ ಎಂದು ಗೌತಮ್ ಗಂಭೀರ್ ವಾಗ್ದಾಳಿ ನಡೆಸಿದ್ದರು. ಈ ರೀತಿ ಕೆಟ್ಟ ಹೇಳಿಕೆ ಕೊಡುವ ಮುನ್ನ ನಿಮ್ಮ ಮಕ್ಕಳನ್ನು ಗಡಿಗೆ ಕಳುಹಿಸಿ ಎಂದು ಹೇಳಿದ್ದರು.