ನವದೆಹಲಿ: ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಆಡಿದ ತಂಡದಿಂದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ಕೈಬಿಟ್ಟದ್ದು ವಿವಾದಕ್ಕೆ ಈಡಾಗಿದೆ.
ಮಿಥಾಲಿ ಅವರನ್ನು ಹೊರಗಿಟ್ಟ ವಿಷಯಕ್ಕೆ ಸಂಬಂಧಿಸಿ ಆಡಳಿತಾಧಿಕಾರಿ ಗಳ ಸಮಿತಿಯು ನಾಯಕಿ ಹರ್ಮನ್ ಪ್ರೀತ್ ಕೌರ್ ಅವರನ್ನು ಕರೆಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಮಿಥಾಲಿ ರಾಜ್, ಕೋಚ್ ರಮೇಶ್ ಪೊವಾರ್, ಮ್ಯಾನೇಜರ್ ತ್ರಿಪಾಠಿ ಭಟ್ಟಾಚಾರ್ಯ ಅವರ ಜೊತೆಯೂ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಕ್ರೀಡಾ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಅನಿಶಾ ಗುಪ್ತ ಎಂಬುವರು ಹರ್ಮನ್ಪ್ರೀತ್ ಅವರನ್ನು ವಂಚಕಿ ಎಂದು ಕರೆದು ಟ್ವೀಟ್ ಮಾಡಿರುವುದರಿಂದ ಸಿಒಎ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.