ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘಿಸಿದ್ದಾರೆಂದು ಈಚೆಗೆ ದೂರು ನೀಡಿದ್ದ ಸಂಜೀವ್ ಗುಪ್ತಾ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಸದಸ್ಯತ್ವ ತೊರೆದಿದ್ದಾರೆ.
ವಿರಾಟ್ ಕೊಹ್ಲಿ ಅವರು ಕಂಪೆನಿಯೊಂದರ ನಿರ್ದೇಶಕರಾಗಿದ್ದಾರೆ. ಆ ಕಂಪೆನಿಯು ವಿರಾಟ್ ಸೇರಿದಂತೆ ಭಾರತ ತಂಡದ ಕೆಲವು ಪ್ರಮುಖರ ವಾಣಿಜ್ಯಕ ಮತ್ತು ಪ್ರಾಯೋಜಕತ್ವ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ ಎಂದು ಗುಪ್ತಾ ಆರೋಪಿಸಿದ್ದರು. ಬಿಸಿಸಿಐ ಒಂಬುಡ್ಸ್ಮನ್ ಡಿ.ಕೆ. ಜೈನ್ ಅವರು ದೂರು ಸ್ವೀಕರಿಸಿದ್ದರು.
’ಸಂಜೀವ್ ಗುಪ್ತಾ ಅವರುಆಜೀವ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ‘ ಎಂದು ಎಂಪಿಸಿಎ ಮೂಲಗಳು ಖಚಿತಪಡಿಸಿವೆ.
ಈ ಹಿಂದೆ ಗುಪ್ತಾ ಅವರು ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಅವರ ವಿರುದ್ಧವೂ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯ ಆರೋಪ ನೀಡಿದ್ದರು.
ಆಗ ಕ್ರಿಕೆಟ್ ಸಲಹಾ ಸಮಿತಿಯಲ್ಲಿ ಇದ್ದ ಈ ಮೂವರು ಆಟಗಾರರು ತಮ್ಮ ಸ್ಥಾನ ಬಿಟ್ಟಿದ್ದರು.