ಸದ್ಯ ಗಂಗೂಲಿ ಅವರು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ (ಸಿಎಬಿ) ಅಧ್ಯಕ್ಷರಾಗಿದ್ದಾರೆ. ಅಲ್ಲದೆ, ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರರೂ ಆಗಿದ್ದಾರೆ. ಕ್ರಿಕೆಟ್ ಕಾಮೆಂಟರಿ ಕ್ಷೇತ್ರದಲ್ಲೂ ಸಕ್ರಿಯರಾಗಿರುವ ಅವರು ಬಂಗಾಳಿ ಕ್ವಿಜ್ ಕಾರ್ಯಕ್ರಮವೊಂದನ್ನೂ ನಡೆಸಿಕೊಡುತ್ತಿದ್ದಾರೆ.
‘ಐಪಿಎಲ್, ಸಿಎಬಿ, ಕ್ರಿಕೆಟ್ ಕಾಮೆಂಟರಿ... ಹೀಗೆಸದ್ಯ ಅನೇಕ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ. ಮೊದಲು ಇವುಗಳನ್ನು ಪೂರ್ತಿಗೊಳಿಸುತ್ತೇನೆ. ಆದರೆ ಮುಂದೊಂದು ದಿನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಟೀಂ ಇಂಡಿಯಾದ ಪ್ರಮುಖ ಯಶಸ್ವಿ ನಾಯಕರಲ್ಲೊಬ್ಬರಾಗಿರುವ ಗಂಗೂಲಿ ಕ್ರಿಕೆಟ್ ಸಲಹಾ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದೇ ಸಮಿತಿ ರವಿ ಶಾಸ್ತ್ರಿ ಅವರನ್ನು ಟೀಂ ಇಂಡಿಯಾದ ಕೋಚ್ ಆಗಿ ಆಯ್ಕೆ ಮಾಡಿತ್ತು.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ನಂತರ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಅವಧಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಇತ್ತೀಚೆಗೆಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಕೋಚ್ ಹುದ್ದೆಗೆ ಅರ್ಜಿ ಕರೆದಿತ್ತು.
ಈ ಮಧ್ಯೆ, ರವಿ ಶಾಸ್ತ್ರಿ ಅವರಿಗೆ ಮತ್ತೊಂದು ಅವಕಾಶ ನೀಡುವ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಒಲವು ತೋರಿದ್ದರೂ ಕೋಚ್ ಹುದ್ದೆಗೆ ಆಸ್ಟ್ರೇಲಿಯಾದ ಅನುಭವಿ ತರಬೇತುದಾರ ಟಾಮ್ ಮೂಡಿ ಒಳಗೊಂಡಂತೆ ಕೆಲವು ಅಂತರರಾಷ್ಟ್ರೀಯ ಮಾಜಿ ಆಟಗಾರರೂ ಅರ್ಜಿ ಸಲ್ಲಿಸಿದ್ದಾರೆ ಎಂದು ಈಚೆಗೆ ವರದಿಯಾಗಿದೆ.