ನ್ಯೂಯಾರ್ಕ್: ಟಿ20 ವಿಶ್ವಕಪ್ ಟೂರ್ನಿ ಬಳಿಕ ಭಾರತದ ಕೋಚ್ ಹುದ್ದೆಯಿಂದ ಕೆಳಗಿಳಿಯುವುದಾಗಿ ರಾಹುಲ್ ದ್ರಾವಿಡ್ ಸೋಮವಾರ ಹೇಳಿದ್ದಾರೆ.
ದ್ರಾವಿಡ್ ಅವರ ಒಪ್ಪಂದವು ಈ ತಿಂಗಳ ಕೊನೆಯಲ್ಲಿ ಕೊನೆಗೊಳ್ಳುತ್ತದೆ. ಸುಮಾರು ಮೂರು ವರ್ಷದಿಂದ ತಂಡದ ತರಬೇತುದಾರಾಗಿದ್ದಾರೆ. ಅವರು ಕೋಚ್ ಹುದ್ದೆಗೆ ಮರು ಅರ್ಜಿ ಸಲ್ಲಿಸುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.
ಐರ್ಲೆಂಡ್ ವಿರುದ್ಧದ ಭಾರತದ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ 51 ವರ್ಷದ ರಾಹುಲ್, ‘ಇದು ನಾನು ಉಸ್ತುವಾರಿ ವಹಿಸುವ ಕೊನೆಯ ಟೂರ್ನಿಯಾಗಿದೆ’ ಎಂದು ಹೇಳಿದರು.
‘ದುರದೃಷ್ಟವಶಾತ್, ಬಿಡುವಿಲ್ಲದ ವೇಳಾಪಟ್ಟಿ ಇದೆ. ನನ್ನ ಜೀವನದ ಈ ಹಂತದಲ್ಲಿ ಮತ್ತೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಭಾವಿಸುವುದಿಲ್ಲ. ಭಾರತ ತಂಡಕ್ಕೆ ತರಬೇತಿ ನೀಡುವುದನ್ನು ಆನಂದಿಸಿದ್ದೇನೆ ಮತ್ತು ಇದು ನಿಜವಾಗಿಯೂ ವಿಶೇಷ ಕೆಲಸ’ ಎಂದರು.
2021ರ ಟಿ20 ವಿಶ್ವಕಪ್ ನಂತರ ಭಾರತದ ಮಾಜಿ ನಾಯಕ ರವಿ ಶಾಸ್ತ್ರಿ ಅವರಿಂದ ಅಧಿಕಾರ ವಹಿಸಿಕೊಂಡರು.
ಕಳೆದ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಮತ್ತು ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಎರಡರಲ್ಲೂ ಭಾರತ ತಂಡ ಫೈನಲ್ ತಲುಪಿತ್ತು.
‘ಪ್ರಾಮಾಣಿಕವಾಗಿ ಹೇಳುವುದಾದರೆ, ಈ ಟೂರ್ನಿಗಳಲ್ಲಿ ನಾವು ನಿಜವಾಗಿಯೂ ಉತ್ತಮವಾಗಿ ಆಡಿದ್ದೇವೆ ಎಂದು ಭಾವಿಸುತ್ತೇನೆ’ ಎಂದರು.