ವಿಶಾಖಪಟ್ಟಣ: ಇಲ್ಲಿ ನಡೆಯುತ್ತಿರುವ ಮೂರನೇ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಋತುರಾಜ್ ಗಾಯಕವಾಡ್ ಹಾಗೂ ಇಶಾನ್ ಕಿಶನ್ ಅವರ ಅಬ್ಬರದ ಅರ್ಧಶತಕದ ನೆರವಿನಿಂದದಕ್ಷಿಣ ಆಫ್ರಿಕಾಕ್ಕೆ 180ರನ್ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 5 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿತು.
ಟೀಮ್ ಇಂಡಿಯಾಕ್ಕೆ ಆರಂಭಿಕರಾದ ಗಾಯಕವಾಡ್ ಹಾಗೂ ಇಶಾನ್ ಭದ್ರ ಬುನಾದಿ ಹಾಕಿಕೊಟ್ಟರು. ಕಳೆದ ಎರಡು ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಗಾಯಕವಾಡ್, ಇಂದಿನ ಪಂದ್ಯದಲ್ಲಿ ಆರಂಭದಿಂದಲೇ ಅತಿಥೇಯ ತಂಡದ ಬೌಲರ್ಗಳನ್ನು ಚಚ್ಚತೊಡಗಿದರು. ಅವರು 35 ಎಸೆತಗಳಲ್ಲಿ 57 ರನ್ ಗಳಿಸಿ ಕೇಶವ್ ಮಹಾರಾಜ್ಗೆ ವಿಕೆಟ್ ಒಪ್ಪಿಸಿದರು. ಅವರ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಿದ್ದವು.
ಇಶಾನ್ ಕಿಶನ್ 35 ಎಸೆತಗಳಲ್ಲಿ 54 ರನ್ ಗಳಿಸಿ ಡ್ವೇನ್ ಪ್ರಿಟೊರಿಯಸ್ಗೆ ವಿಕೆಟ್ ಒಪ್ಪಿಸಿದರು. ಇಶಾನ್ ಇನ್ನಿಂಗ್ಸ್ನಲ್ಲಿ ಎರಡು ಆಕರ್ಷಕ ಸಿಕ್ಸರ್ ಹಾಗೂ 5 ಬೌಂಡರಿ ಒಳಗೊಂಡಿದ್ದವು.
ಶ್ರೇಯಸ್ ಅಯ್ಯರ್ (14 ರನ್, 11 ಎಸೆತ) ಪರಿಣಾಮಕಾರಿಯಾಗಲಿಲ್ಲ. ಮೊದಲ ಮೂರು ವಿಕೆಟ್ ಪತನದ ಬಳಿಕ ರನ್ ಗತಿಯಲ್ಲಿ ತುಸು ಇಳಿಕೆ ಕಂಡುಬಂತು. ನಾಯಕ ರಿಷಭ್ ಪಂತ್ ಕೇವಲ 6 ರನ್ ಗಳಿಸಿ ಪೆವಿಲಿಯನ್ ಹಾದಿಹಿಡಿದರು. ದಿನೇಶ್ ಕಾರ್ತಿಕ್ ಸಹ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 31 ರನ್, ಅಕ್ಸರ್ ಪಟೇಲ್ 5 ರನ್ ಗಳಿಸಿ ಔಟಾಗದೆ ಉಳಿದರು.
ದಕ್ಷಿಣ ಆಫ್ರಿಕಾ ಪರ ಡ್ವೇನ್ ಪ್ರಿಟೊರಿಯಸ್ 2, ಕೇಶವ್ ಮಹಾರಾಜ್ 1, ತಬ್ರೆಜ್ ಶಮ್ಸಿ 1 ಹಾಗೂ ರಬಾಡ 1 ವಿಕೆಟ್ ಪಡೆದರು.