ಬೆಂಗಳೂರು: ಆಟದ ಅಂಗಳದಲ್ಲಿ ತಮ್ಮ ಅಚ್ಚರಿಯ ನಿರ್ಧಾರಗಳ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹಲವು ಗೆಲುವುಗಳ ಸಿಹಿ ಉಣಿಸಿದ್ದ ‘ಕ್ಯಾಪ್ಟನ್ ಕೂಲ್’ ಮಹೇಂದ್ರಸಿಂಗ್ ದೋನಿ ಮತ್ತೊಮ್ಮೆ ಆಶ್ಚರ್ಯ ಮೂಡಿಸಿದ್ದಾರೆ.
ಹೌದು, ಸೋಮವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರನ್ನು ರವಿಂದ್ರ ಜಡೇಜಾ ಕ್ಲೀನ್ ಬೌಲ್ಡ್ ಮಾಡಿದ್ದರು. ಇದಕ್ಕೆ ಕಾರಣ ಎಂ.ಎಸ್.ಧೋನಿ ನೀಡಿದ ಸಲಹೆಯೇ ಕಾರಣ ಎಂಬುದು ಸಾಬೀತಾಗಿದೆ.
ಈ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಸಿಎಸ್ಕೆ ತಂಡ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತ್ತು.
189 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ರಾಜಸ್ಥಾನಕ್ಕೆ ಜೋಸ್ ಬಟ್ಲರ್ 49 ರನ್ ಗಳಿಸಿ ಆಸರೆಯಾಗಿದ್ದರು. ಇದೇ ವೇಳೆ 11ನೇ ಓವರ್ನಲ್ಲಿ ನಾಯಕ ಧೋನಿಯ ಸಲಹೆಯಂತೆ ಬೌಲಿಂಗ್ ಮಾಡಿದ ಜಡೇಜಾ, ಬಟ್ಲರ್ ಅವರಿಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಯಶಸ್ವಿಯಾದರು.
ಬಟ್ಲರ್ ಔಟ್ ಆದ ಬಳಿಕ ಕ್ರೀಸ್ಗೆ ಬಂದ ಯಾರೊಬ್ಬ ಆಟಗಾರರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಈ ಮೂಲಕ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಸೋಲೊಪ್ಪಿಕೊಂಡಿತ್ತು.
ಈ ಪಂದ್ಯದಲ್ಲಿ ಜಡೇಜಾ ನಾಲ್ಕು ಕ್ಯಾಚ್ ಹಾಗೂ ಎರಡು ವಿಕೆಟ್ ಪಡೆಯುವುದರ ಜತೆಗೆ ಉತ್ತಮ ಫೀಲ್ಡಿಂಗ್ ಪ್ರದರ್ಶಿಸಿದರು.