ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಸ್ಥಾನದಿಂದ ಡೇವಿಡ್ ವಾರ್ನರ್ ಅವರನ್ನು ವಜಾಗೊಳಿಸಲಾಗಿದೆ.
ಅವರ ಸ್ಥಾನಕ್ಕೆ ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ ಅವರನ್ನು ಕಪ್ತಾನರಾಗಿ ನೇಮಕಗೊಳಿಸಲಾಗಿದೆ. ಐಪಿಎಲ್ 14ನೇ ಆವೃತ್ತಿಯಲ್ಲಿ ಉಳಿದಿರುವ ಪಂದ್ಯಗಳಲ್ಲಿ ವಿಲಿಯಮ್ಸನ್ ತಂಡವನ್ನು ಮುನ್ನಡೆಸಲಿದ್ದಾರೆ.
ಇದುವರೆಗಿನ ಪಂದ್ಯಗಳಲ್ಲಿ ಸನ್ರೈಸರ್ಸ್ ಕೆಟ್ಟ ಪ್ರದರ್ಶನ ನೀಡಿರುವುದೇ ವಾರ್ನರ್ಗೆ ಮುಳುವಾಗಿ ಪರಿಣಮಿಸಿದೆ. ಆಡಿರುವ ಆರು ಪಂದ್ಯಗಳಲ್ಲಿ ಒಂದು ಪಂದ್ಯ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಎರಡು ಅಂಕ ಮಾತ್ರ ಗಳಿಸಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಮೊದಲ ಆರು ಪಂದ್ಯಗಳ ಪೈಕಿ ಐದರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಮುಗ್ಗರಿಸಿದೆ.
ಅಷ್ಟೇ ಯಾಕೆ ವಿದೇಶಿ ಆಟಗಾರರ ಸಂಯೋಜನೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬರಲಿದೆ ಎಂಬುದನ್ನು ಸನ್ರೈಸರ್ಸ್ ಮ್ಯಾನೇಜ್ಮೆಂಟ್ ಖಚಿತಪಡಿಸಿದೆ. ಇದರಿಂದಾಗಿ ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅವರನ್ನು ಕೈಬಿಡುವ ಸಾಧ್ಯತೆಯಿದೆ.
ಹಾಗಿದ್ದರೂ ಓರ್ವ ಆಟಗಾರನಾಗಿ ವಾರ್ನರ್ ಅತ್ಯುತ್ತಮ ಪ್ರದರ್ಶನ ನೀಡುವುದನ್ನು ಎದುರು ನೋಡುತ್ತಿರುವುದಾಗಿ ಸನ್ರೈಸರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.