ಆಕ್ಲೆಂಡ್: ಟಿ20 ಸರಣಿಯಲ್ಲಿ ಭಾರತದ ವಿಶ್ವ ದರ್ಜೆ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸುವುದು ಕಷ್ಟ. ಅವರನ್ನು ಕಟ್ಟಿಹಾಕಲು ಬೌಲರ್ಗಳು ಮತ್ತಷ್ಟು ಆಕ್ರಮಣಕಾರಿಯಾಗಿ ಆಡಬೇಕು ಎಂದು ನ್ಯೂಜಿಲೆಂಡ್ ತಂಡದ ಲೆಗ್ ಸ್ಪಿನ್ನರ್ ಈಶ್ ಸೋದಿ ಹೇಳಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯರು ನೀಡಿದ್ದ 204ರನ್ ಗುರಿ ಬೆನ್ನಟ್ಟಿದ್ದ ವಿರಾಟ್ ಕೊಹ್ಲಿ ಪಡೆ, ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಮುಟ್ಟಿತ್ತು. ಹೀಗಾಗಿ ಸೋದಿ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.
‘ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಐದಾರು ಮಂದಿ ವಿಶ್ವದರ್ಜೆಯ ಬ್ಯಾಟ್ಸ್ಮನ್ಗಳು ಇದ್ದಾರೆ. ಹಾಗಾಗಿ ಅವರನ್ನು ನಿಯಂತ್ರಿಸುವುದು ಕಷ್ಟದ ಕೆಲಸ. ಒಂದು ವೇಳೆ ನಾವು ಮುಂದಿನ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಕಾಣಿಸಿಕೊಂಡರೆ ಅದು ನಾವು ಮೊದಲ ಪಂದ್ಯದಲ್ಲಿ ಕಲಿತ ಪಾಠವಾಗಲಿದೆ’ ಎಂದು ಹೇಳಿಕೊಂಡಿದ್ದಾರೆ.
‘ಪಂದ್ಯ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಗಮನಿಸಬೇಕು. ಎಲ್ಲ ಆಟಗಾರರ ವಿರುದ್ಧವೂ ಆಕ್ರಮಣಕಾರಿಯಾಗಿ ಆಡಲು ಸಾಧ್ಯವಿಲ್ಲ. ಬ್ಯಾಟ್ಸ್ಮನ್ನಿಂದ ಬ್ಯಾಟ್ಸ್ಮನ್ಗೆ ಹಾಗೂ ಬೌಲರ್ನಿಂದ ಬೌಲರ್ಗೆ ವಿಭಿನ್ನ ಸನ್ನಿವೇಶಗಳಿರುತ್ತವೆ. ಹಾಗಾಗಿ ನಾಯಕ ಮತ್ತು ಬೌಲರ್ಗಳೊಂದಿಗೆ ಚರ್ಚೆ ನಡೆಸುತ್ತಿರಬೇಕು’ಎಂದು ತಿಳಿಸಿದ್ದಾರೆ.