ನವೆದೆಹಲಿ: 'ನಮ್ಮ ತಂಡದಲ್ಲಿ ಧೈರ್ಯ ಇರಲಿಲ್ಲ' ಎಂಬ ನಾಯಕ ವಿರಾಟ್ ಕೊಹ್ಲಿ ಹೇಳಿಕೆಯು ಅತ್ಯಂತ ದುರ್ಬಲವಾಗಿದ್ದು, ತಂಡದ ಮನೋಬಲ ವೃದ್ಧಿಸಲು ಮುಖ್ಯ ಕೋಚ್ ರವಿಶಾಸ್ತ್ರಿ ಹಾಗೂ ಮಾರ್ಗದರ್ಶಕ ಮಹೇಂದ್ರ ಸಿಂಗ್ ಧೋನಿ ನೆರವಾಗಬೇಕಿದೆ ಎಂದು ಭಾರತದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಎಂಟು ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು. ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿರುವ ಕೊಹ್ಲಿ, 'ಬ್ಯಾಟಿಂಗ್ ಅಥವಾ ಬೌಲಿಂಗ್ನಲ್ಲಿ ನಾವು ಧೈರ್ಯಶಾಲಿ ಆಗಿರಲಿಲ್ಲ. ನಮ್ಮ ದೈಹಿಕ ಭಾಷೆಯು ಧೈರ್ಯದಿಂದ ಕೂಡಿರಲಿಲ್ಲ' ಎಂದು ಹೇಳಿದ್ದರು.
'ನಿಸ್ಸಂಶಯವಾಗಿಯೂ ಇದು ವಿರಾಟ್ ಕೊಹ್ಲಿ ಅವರಂತಹ ದೊಡ್ಡ ಆಟಗಾರನ ದುರ್ಬಲ ಹೇಳಿಕೆಯಾಗಿದೆ. ಅವರು ತಂಡಕ್ಕಾಗಿ ಪಂದ್ಯ ಗೆಲ್ಲುವ ಬಯಕೆ ಹಾಗೂ ಹಂಬಲ ಹೊಂದಿದ್ದಾರೆ ಎಂದು ನಾವೆಲ್ಲರೂ ನಂಬುತ್ತೇವೆ' ಎಂದು 'ಎಬಿಪಿ ನ್ಯೂಸ್'ಗೆ ಕಪಿಲ್ ತಿಳಿಸಿದ್ದಾರೆ.
'ಆದರೆ ತಂಡದ ದೈಹಿಕ ಭಾಷೆ ಹಾಗೂ ನಾಯಕನ ಚಿಂತನೆಯು ಹೀಗಾದ್ದಲ್ಲಿ ಡ್ರೆಸ್ಸಿಂಗ್ ಕೊಠಡಿಯೊಳಗಿನ ಆಟಗಾರರ ಮನೋಬಲವನ್ನು ಎತ್ತಿ ಹಿಡಿಯುವುದು ತುಂಬಾನೇ ಕಷ್ಟ' ಎಂದು ಹೇಳಿದರು.
'ಈ ಸನ್ನಿವೇಶದಲ್ಲಿ ತಂಡದ ಮನೋಬಲವನ್ನು ಮೇಲಕ್ಕೆತ್ತಲು ನಾನು ನನ್ನ ಸ್ನೇಹಿತ ಶಾಸ್ತ್ರಿ ಹಾಗೂ ಧೋನಿ ಅವರನ್ನು ಒತ್ತಾಯಿಸುತ್ತೇನೆ. ಈಗ ಆತ್ಮವಿಶ್ವಾಸವನ್ನು ತುಂಬುವುದು ಧೋನಿಯ ಜವಾಬ್ದಾರಿಯಾಗಿದೆ' ಎಂದುತಿಳಿಸಿದರು.