ನವದೆಹಲಿ: ಘೇಂಡಾಮೃಗ ರಕ್ಷಣೆಯ ಕ್ರಮಗಳಿಗೆ ಬೆಂಬಲವಾಗಿ ನಿಂತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಕೊಂಡಾಡಿದ್ದಾರೆ. ಮೋದಿ ಅವರನ್ನು ಹೀರೊ ಎಂದೂ ಬಣ್ಣಿಸಿದ್ದಾರೆ.
ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಪೀಟರ್ಸನ್ ‘ಧನ್ಯವಾದಗಳು. ಘೇಂಡಾಮೃಗಗಳ ರಕ್ಷಣೆಗಾಗಿ ವಿಶ್ವನಾಯಕ ನರೇಂದ್ರ ಮೋದಿ ಅವರು ಬೆಂಬಲವಾಗಿ ನಿಂತಿದ್ದಾರೆ. ಭಾರತದಲ್ಲಿ ಖಡ್ಗಮೃಗದ ಸಂಖ್ಯೆ ಏರಿಕೆಯಾಗಲು ಇದೇ ಕಾರಣ. ಅವರು ಎಂತಹ ನಾಯಕ,’ ಎಂದು ಕೊಂಡಾಡಿದ್ದಾರೆ.
ಘೇಂಡಾಮೃಗಗಳ ಹತ್ಯೆ ಮತ್ತು ಕೊಂಬುಗಳ ಕಳ್ಳಸಾಗಣೆಗೆ ಕಡಿವಾಣ ಹಾಕುವ ಸಲುವಾಗಿ ಅಸ್ಸಾಂ ಸರ್ಕಾರದ ವಶದಲ್ಲಿದ್ದ 2,479 ಕೊಂಬುಗಳನ್ನು ಸಿಎಂ ಹಿಮಂತ ಬಿಸ್ವ ಶರ್ಮಾ ನೇತೃತ್ವದಲ್ಲಿ ಇತ್ತೀಚೆಗೆ ಸುಡಲಾಯಿತು. ವನ್ಯಜೀವಿಗಳ ಬೇಟೆಯನ್ನು ಕೊನೆಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ತಾವು ಅನುಸರಿಸಿರುವುದಾಗಿ ಶರ್ಮಾ ಟ್ವೀಟ್ ಮಾಡಿದ್ದರು.
ಶರ್ಮಾ ಅವರ ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಅಸ್ಸಾಂ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ್ದರು.ಒಂದು ಕೊಂಬಿನ ಖಡ್ಗಮೃಗ ಭಾರತದ ಹೆಮ್ಮೆ ಮತ್ತು ಅದರ ರಕ್ಷಣೆಗಾಗಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಟ್ವೀಟ್ನಲ್ಲಿ ಹೇಳಿದ್ದರು.
ಘೇಂಡಾಮೃಗದ ಕೊಂಬಿನಲ್ಲಿ ಔಷಧೀಯ ಗುಣಗಳಿವೆ ಎಂಬ ನಂಬಿಕೆ ಇದೆ. ಈ ಕಾರಣಕ್ಕೆ ಈ ಪ್ರಾಣಿಗಳ ಕಳ್ಳಬೇಟೆಅಸ್ಸಾಂನಲ್ಲಿ ಅಧಿಕ. ಈ ನಂಬಿಕೆಯನ್ನು ಹೋಗಲಾಡಿಸುವ ಸಲುವಾಗಿ ಅಸ್ಸಾಂ ಸರ್ಕಾರ ತನ್ನ ವಶದಲ್ಲಿದ್ದ ಘೇಂಡಾಮೃಗಗಳ ಕೊಂಬುಗಳನ್ನು ಸುಡುವ ನಿರ್ಧಾರ ಕೈಗೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.