ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಬಾಂಗ್ಲಾದೇಶ ಮೂರನೇ ಟಿ–20 ಪಂದ್ಯ; ಸರಣಿ ಜಯಕ್ಕಾಗಿ ಪೈಪೋಟಿ

ರೋಚಕ ಹಣಾಹಣಿ ನಿರೀಕ್ಷೆಯಲ್ಲಿ..
Last Updated 9 ನವೆಂಬರ್ 2019, 19:41 IST
ಅಕ್ಷರ ಗಾತ್ರ

ನಾಗಪುರ: ಜಮ್ತಾದ ವಿದರ್ಭ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾನುವಾರ ಆತಿಥೇಯ ಭಾರತಕ್ಕೆ ಆಘಾತ ಮೂಡಿಸಿ ಇತಿಹಾಸ ಬರೆಯುವ ತವಕದಲ್ಲಿ ಬಾಂಗ್ಲಾದೇಶ ಇದೆ.

ಟ್ವೆಂಟಿ–20 ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿರುವ ಉಭಯ ತಂಡಗಳು ಗೆಲುವಿಗಾಗಿ ರೋಚಕ ಹಣಾಹಣಿ ಮಾಡುವ ನಿರೀಕ್ಷೆ ಮೂಡಿದೆ. ದೆಹಲಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಬಾಂಗ್ಲಾ ತಂಡವು ಗೆದ್ದು ಬೀಗಿತ್ತು.

ಆದರೆ ರಾಜ್‌ಕೋಟ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಯಜುವೇಂದ್ರ ಚಾಹಲ್ ಉತ್ತಮ ಬೌಲಿಂಗ್ ಮತ್ತು ಹಂಗಾಮಿ ನಾಯಕ ರೋಹಿತ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಭಾರತವು ಜಯದ ಹಾದಿಗೆ ಮರಳಿತ್ತು.

ಭಾರತಕ್ಕೆ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆಗಳಿಲ್ಲ. ರೋಹಿತ್ ಮತ್ತು ಶಿಖರ್ ಧವನ್ ಉತ್ತಮ ಆರಂಭ ನೀಡುತ್ತಿದ್ದಾರೆ. ಆದರೆ, ಕೆ.ಎಲ್. ರಾಹುಲ್ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಇನ್ನಷ್ಟು ಏಕಾಗ್ರತೆಯಿಂದ ಆಡುವ ಅಗತ್ಯವಿದೆ. ಹೋದ ಪಂದ್ಯದಲ್ಲಿ ಆಕರ್ಷಕವಾದ ಲೇಟ್ ಅಪ್ಪರ್ ಕಟ್ ಆಡಿದ್ದ ಶ್ರೇಯಸ್ ಅಯ್ಯರ್ ವಿಶ್ವಾಸ ಮೂಡಿಸಿದ್ದಾರೆ.

ರಿಷಭ್ ಪಂತ್ ಅವರು ವಿಕೆಟ್‌ಕೀಪಿಂಗ್, ಯುಡಿಆರ್‌ಎಸ್ ಮತ್ತು ಬ್ಯಾಟಿಂಗ್‌ಗಳಲ್ಲಿ ಎಡವುತ್ತಿದ್ದಾರೆ. ಇದರಿಂದಾಗಿ ಬಹಳಷ್ಟು ಟೀಕೆಗಳಿಗೆ ತುತ್ತಾಗಿದ್ದಾರೆ. ಆದರೆ, ತಂಡದ ನಾಯಕ ಮತ್ತು ವ್ಯವಸ್ಥಾಪಕ ಮಂಡಳಿ ಅವರ ಬೆಂಬಲಕ್ಕೆ ನಿಂತಿದೆ. ಅವರಿಗೆ ಇಲ್ಲಿ ಮತ್ತೊಂದು ಅವಕಾಶ ಸಿಗಬಹುದು. ಇಲ್ಲದಿದ್ದರೆ ಕೇರಳದ ಸಂಜು ಸ್ಯಾಮ್ಸನ್‌ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ವಿಜಯ್ ಹಜಾರೆ, ದುಲೀಪ್ ಟ್ರೋಫಿ ಟೂರ್ನಿಗಳಲ್ಲಿ ಅಮೋಘವಾಗಿ ಆಡಿದ್ದ ಕರ್ನಾಟಕದ ಮನೀಷ್ ಪಾಂಡೆ ಅವರಿಗೆ ಎರಡೂ ಪಂದ್ಯಗಳಲ್ಲಿ ಅವಕಾಶ ಕೊಟ್ಟಿಲ್ಲ. ಈ ಪಂದ್ಯದಲ್ಲಿ ಪಾಂಡೆ ಕಣಕ್ಕಿಳಿದರೆ, ಮಧ್ಯಮ ಕ್ರಮಾಂಕ ಮತ್ತಷ್ಟು ಬಲಗೊಳ್ಳಬಹುದು. ನಾಗಪುರದ ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ಉತ್ತಮ ನೆರವು ಲಭಿಸಬಹುದು. ಆದ್ದರಿಂದ ಯಜುವೇಂದ್ರ ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್ ಅವರೊಂದಿಗೆ ಕೃಣಾಲ್ ಕೂಡ ಅವಕಾಶ ಗಿಟ್ಟಿಸಬಹುದು.

ಪ್ರಮುಖ ಬೌಲರ್‌ಗಳ ಅನುಪಸ್ಥಿತಿಯಲ್ಲಿ ಮಧ್ಯಮವೇಗದ ಹೊಣೆ ಶಾರ್ದೂಲ್ ಠಾಕೂರ್ ಮತ್ತು ಖಲೀಲ್ ಅಹಮದ್ ಅವರ ಹೆಗಲಿಗೆ ಬೀಳುವುದು ಖಚಿತ.ಆದರೆ ಬಾಂಗ್ಲಾ ತಂಡವು ಈ ಪಂದ್ಯದಲ್ಲಿ ಸುಲಭವಾಗಿ ಶರಣಾಗುವಂತೆ ಕಾಣುತ್ತಿಲ್ಲ. ತಿರುಗೇಟು ನೀಡಿ, ಸರಣಿಯಲ್ಲಿ ಮೇಲುಗೈ ಸಾಧಿಸುವ ಛಲದಲ್ಲಿದೆ. ಇದರೊಂದಿಗೆ ಭಾರತದ ನೆಲದಲ್ಲಿಯೇ ಸರಣಿ ಜಯದ ದಾಖಲೆ ಬರೆಯಲು ಸಿದ್ಧವಾಗಿದೆ.

ತಂಡದಲ್ಲಿರುವ ಪ್ರತಿಭಾವಂತ ಆಟಗಾರರಾದ ಮುಷ್ಫಿಕರ್ ರಹೀಮ್, ಲಿಟನ್ ದಾಸ್, ಸೌಮ್ಯ ಸರ್ಕಾರ್, ಬೌಲರ್ ಮುಸ್ತಫೀಜುರ್ ರೆಹಮಾನ್, ನಾಯಕ ಮಹಮುದುಲ್ಲಾ ರಿಯಾದ್ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಆತಿಥೇಯರಿಗೆ ಕಠಿಣ ಸವಾಲು ಎದುರಾಗಬಹುದು.

‘‍ರಿಷಭ್‌ರನ್ನು ಅವರ ಪಾಡಿಗೆ ಬಿಡಿ’
ವಿಕೆಟ್‌ಕೀಪರ್ ರಿಷಭ್ ಪಂತ್ ಅವರನ್ನು ಅವರ ಪಾಡಿಗೆ ಬಿಟ್ಟುಬಿಡುವುದು ಒಳ್ಳೆಯದು. ಬಗ್ಗೆ ಬಹಳಷ್ಟು ಟೀಕೆಗಳು ಕೇಳಿಬರುತ್ತಿವೆ. ಆದರೆ ಅವರಿಗೆ ಸ್ವಲ್ಪ ಸಮಯ ನೀಡಬೇಕು. ಅವರು ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅದಕ್ಕೆ ಅವಕಾಶ ನೀಡಬೇಕು ಎಂದು ಭಾರತ ಕ್ರಿಕೆಟ್ ತಂಡದ ಹಂಗಾಮಿ ನಾಯಕ ರೋಹಿತ್ ಶರ್ಮಾ ಟೀಕಾಕಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬಾಂಗ್ಲಾ ದೇಶ ವಿರುದ್ಧದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ವಿಕೆಟ್‌ಕೀಪಿಂಗ್‌ನಲ್ಲಿ ಕೆಲವು ಲೋಪಗಳನ್ನು ಮಾಡಿದ್ದರು. ಇತ್ತೀಚೆಗಿನ ಕೆಲವು ಪಂದ್ಯಗಳಲ್ಲಿ ಅವರು ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ.

ಶನಿವಾರ ಸುದ್ದಿಗಾರರು ರಿಷಭ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೋಹಿತ್, ‘ಅವರು ನಿರ್ಭೀತ ಕ್ರಿಕೆಟಿಗ. ಅವರಿಗೆ ಅಂತಹ ಮುಕ್ತ ವಾತಾವರಣ ವಾತಾವರಣ ಕಲ್ಪಿಸಬೇಕು. ಆಧ್ದರಿಂದ ನೀವು (ಮಾಧ್ಯಮದವರು) ಸ್ವಲ್ಪ ಕಾಲ ಅವರ ಮೇಲಿಂದ ದೃಷ್ಟಿ ಸರಿಸಿಕೊಳ್ಳಿರಿ’ ಎಂದು ಕೋರಿದರು.

ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ರಿಷಭ್ ಪಂತ್ (ವಿಕೆಟ್‌ಕೀಪರ್), ಶ್ರೇಯಸ್ ಅಯ್ಯರ್, ಕೃಣಾಲ್ ಪಾಂಡ್ಯ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ದೀಪಕ್ ಚಾಹರ್, ರಾಹುಲ್ ಚಾಹರ್, ಶಾರ್ದೂಲ್ ಠಾಕೂರ್.

ಬಾಂಗ್ಲಾದೇಶ: ಮಹಮುದುಲ್ಲಾ ರಿಯಾದ್ (ನಾಯಕ), ತೈಜುಲ್ ಇಸ್ಲಾಂ, ಮೊಹಮ್ಮದ್ ಮಿಥುನ್, ಲಿಟನ್ ಕುಮಾರ್ ದಾಸ್, ಸೌಮ್ಯ ಸರ್ಕಾರ್, ನೈಮ್ ಶೇಖ್, ಮುಷ್ಫೀಕುರ್ ರಹೀಂ, ಅಫಿಫ್ ಹೊಸೇನ್, ಮೊಸಾಡೆಕ್ ಹೊಸೆನ್, ಸೈಕತ್ ಅಮಿನುಲ್ ಇಸ್ಲಾಂ ವಿಪ್ಲವ್, ಅರಾಫತ್ ಸನ್ನಿ, ಅಬು ಹೈದರ್, ಅಲ್ ಅಮಿನ್ ಹೊಸೇನ್, ಮುಸ್ತಫಿಜುರ್ ರೆಹಮಾನ್, ಶಫಿಯುಲ್ ಇಸ್ಲಾಂ

ಪಂದ್ಯ ಆರಂಭ: ರಾತ್ರಿ 7ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT