ಮೈಸೂರು: ಕರ್ನಾಟಕ ತಂಡದ ವೇಗಿ ವೈಶಾಖ ವಿಜಯಕುಮಾರ್ (45ಕ್ಕೆ3) ಹಾಗೂ ಎಡಗೈ ಸ್ಪಿನ್ನರ್ ಎ.ಸಿ. ರೋಹಿತ್ ಕುಮಾರ್ (66ಕ್ಕೆ 3) ಬೌಲಿಂಗ್ ದಾಳಿಗೆ ನಲುಗಿದ ಪ್ರವಾಸಿ ಗೋವಾ ತಂಡವು ಶುಕ್ರವಾರ ಇಲ್ಲಿ ಆರಂಭವಾದ ರಣಜಿ ಪಂದ್ಯದಲ್ಲಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು. ಆದರೆ ಸ್ನೇಹಲ್ ಕೌತಣಕರ್ ಅವರ ಅರ್ಧಶತಕದಿಂದಾಗಿ ಪ್ರವಾಸಿ ಬಳಗವು ದಿನದಾಟದ ಕೊನೆಗೆ ಸಾಧಾರಣ ಮೊತ್ತ ಗಳಿಸಿತು.
ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಗೋವಾ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ 45 ರನ್ಗಳಿಗೆ 3 ವಿಕೆಟ್ ಕಳೆದುಕೊಂಡ ತಂಡವು ಆತಂಕದಲ್ಲಿತ್ತು. ಈ ಹಂತದಲ್ಲಿ ಕೌತಣಕರ್ (83; 193ಎ) ಅರ್ಧಶತಕದ ಬಲದಿಂದ 87 ಓವರ್ಗಳಲ್ಲಿ 8 ವಿಕೆಟ್ಗಳಿಗೆ 228 ರನ್ ಗಳಿಸಿತು. ಕ್ರೀಸ್ನಲ್ಲಿ ಅರ್ಜುನ್ ತೆಂಡೂಲ್ಕರ್ (ಬ್ಯಾಟಿಂಗ್ 10) ಹಾಗೂ ಹೇರಂಭ ಪರಬ್ (ಬ್ಯಾಟಿಂಗ್ 6) ಕ್ರೀಸ್ನಲ್ಲಿದ್ದಾರೆ.
ಸ್ನೇಹಲ್ ಅವರು 4 ರನ್ ಗಳಿಸಿದ್ದಾಗ ಮೈಸೂರಿನ ಯುವವೇಗಿ ವೆಂಕಟೇಶ್ ಹಾಕಿದ ಮೊದಲ ಓವರ್ನಲ್ಲಿ ಎರಡನೇ ಸ್ಲಿಪ್ನಲ್ಲಿದ್ದ ಮನೀಶ್ ಪಾಂಡೆ ಅವರಿಂದ ಜೀವದಾನ ಪಡೆದರು. ಆ ಸಂದರ್ಭ ಕ್ಯಾಚ್ ಪಡೆಯುವ ಯತ್ನದಲ್ಲಿ ಬೆರಳಿಗೆ ಗಾಯಮಾಡಿಕೊಂಡ ಮನೀಶ್ ವಿಶ್ರಾಂತಿಗೆ ತೆರಳಿದರು. ಇದರ ಲಾಭ ಪಡೆದ ಸ್ನೇಹಲ್ ಇನಿಂಗ್ಸ್ಗೆ ಒಂದಿಷ್ಟು ಜೀವ ತುಂಬಿದರು.
ಆರಂಭಿಕ ಆಘಾತ:
ಇನಿಂಗ್ಸ್ನ 4ನೇ ಓವರ್ನಲ್ಲಿ ಆರಂಭಿಕ ಇಶಾನ್ ಗಡೇಕರ್ (6) ವಿಕೆಟ್ ಉರುಳಿಸಿದ ವೈಶಾಖ ಬೇಟೆ ಆರಂಭಿಸಿದರು. ಎಂಟು ಓವರ್ಗಳ ನಂತರ ವಿ. ಕೌಶಿಕ್ ಬೌಲಿಂಗ್ನಲ್ಲಿ ಕೆ.ವಿ. ಸಿದ್ಧಾರ್ಥ್ (2) ಸ್ಲಿಪ್ನಲ್ಲಿ ನಿಖಿನ್ ಜೋಸ್ಗೆ ಕ್ಯಾಚಿತ್ತರು.
ಇನ್ನೊಂದೆಡೆ ಸ್ಪಿನ್ನರ್ ರೋಹಿತ್, ಇನಿಂಗ್ಸ್ನ 24ನೇ ಓವರ್ನಲ್ಲಿ ಸುಯಶ್ ಪ್ರಭುದೇಸಾಯಿ ಅವರನ್ನು ಬೌಲ್ಡ್ ಮಾಡಿದರು. ಈ ಸಂದರ್ಭದಲ್ಲಿ ಜೊತೆಯಾದ ಸ್ನೇಹಲ್ ಕೌತಣಕರ್ ಹಾಗೂ ದರ್ಶನ್ ಮಿಸಾಳ್ ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ 82 ರನ್ ಸೇರಿಸಿದರು. ಮಿಸಾಳ್ ವಿಕೆಟ್ ಗಳಿಸಿದ ರೋಹಿತ್ ಈ ಜೊತೆಯಾಟವನ್ನು ಮುರಿದರು.ವಿಕೆಟ್ಕೀಪರ್ ಶರತ್ ಮಾಡಿದ ಚುರುಕಾದ ಸ್ಟಂಪಿಂಗ್ಗೆ ಮಿಸಾಳ್ ಔಟಾದರು. ತಮ್ಮ ಇನ್ನೊಂದು ಓವರ್ನಲ್ಲಿ ರೋಹಿತ್ ಅವರು ದೀಪರಾಜ್ ಗಾಂವ್ಕರ್ ವಿಕೆಟ್ ಗಳಿಸಿದರು.
ಮಧ್ಯಮ ಕ್ರಮಾಂಕದ ಬ್ಯಾಟರ್ ಸಮರ್ ದುಬಾಷಿ 13 ರನ್ ಗಳಿಸಿದ್ದಾಗ ದೇವದತ್ತ ಪಡಿಕ್ಕಲ್ರಿಂದ ಹಾಗೂ 18 ರನ್ ಗಳಿಸಿದ್ದಾಗ ಕೀಪರ್ ಶರತ್ ಶ್ರೀನಿವಾಸ್ರಿಂದ (ಸ್ಟಂಪ್) ಬಾರಿ ಜೀವದಾನ ಪಡೆದರು. ಆದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು.
ಕರ್ನಾಟಕ ತಂಡವು ಈ ಪಂದ್ಯದಲ್ಲಿ ಎರಡು ಬದಲಾವಣೆಗಳನ್ನು ಮಾಡಿದೆ. ಗಾಯಗೊಂಡಿರುವ ಪ್ರಸಿದ್ಧಕೃಷ್ಣ ಬದಲಿಗೆ ಮೈಸೂರಿನ ವೆಂಕಟೇಶ್ ಹಾಗೂ ಬ್ಯಾಟರ್ ಆರ್. ಸಮರ್ಥ್ ಬದಲಿಗೆ ಬಲಗೈ ಬ್ಯಾಟರ್ ಡಿ. ನಿಶ್ಚಲ್ ಅವರಿಗೆ ಸ್ಥಾನ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.