ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ: ಗಾಯದ ನೋವಿನಲ್ಲೂ ಮಿಂಚಿದ ಮನೀಷ್, ಕರ್ನಾಟಕಕ್ಕೆ ಮುನ್ನಡೆಯ ‘ಶ್ರೇಯ’

Last Updated 11 ಜನವರಿ 2023, 17:49 IST
ಅಕ್ಷರ ಗಾತ್ರ

ಆಲೂರು (ಬೆಂಗಳೂರು): ಲೆಗ್‌ಸ್ಪಿನ್ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಬುಧವಾರ ರಾಜಸ್ಥಾನ ಎದುರಿನ ರಣಜಿ ಪಂದ್ಯದಲ್ಲಿ ಕೇವಲ ಐದು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು. ಅನುಭವಿ ಮನೀಷ್ ಪಾಂಡೆ ತಮ್ಮ ಗಾಯದ ನೋವಿನಲ್ಲಿಯೂ ಬೀಸಾಟವಾಡಿದರು.

ಅವರಿಬ್ಬರ ಛಲದ ಆಟದಿಂದಾಗಿ ಕರ್ನಾಟಕ ತಂಡವು ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ ರಾಜಸ್ಥಾನದ ಎದುರು ಮೊದಲ ಇನಿಂಗ್ಸ್‌ನಲ್ಲಿ 251 ರನ್‌ಗಳ ಮುನ್ನಡೆ ಗಳಿಸಿತು.

ಶ್ರೇಯಸ್ (95; 165ಎ, 4X13) ಮತ್ತು ಮನೀಷ್ (ಬ್ಯಾಟಿಂಗ್ 75; 108ಎ) ಮಹತ್ವದ ಕಾಣಿಕೆ ನೀಡಿದರು. ಇದರಿಂದಾಗಿ ಎರಡನೇ ದಿನದಾಟದ ಮುಕ್ತಾಯಕ್ಕೆ ಕರ್ನಾಟಕವು 118 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 380 ರನ್ ಗಳಿಸಿದೆ. ಮನೀಷ್ ಜೊತೆಗೆ ವಿದ್ವತ್ ಕಾವೇರಪ್ಪ (ಬ್ಯಾಟಿಂಗ್ 3) ಕ್ರೀಸ್‌ನಲ್ಲಿದ್ದಾರೆ. ಪಂದ್ಯದಲ್ಲಿ ಇನ್ನೂ ಎರಡು ದಿನಗಳ ಆಟ ಬಾಕಿಯಿದೆ. ಆತಿಥೇಯರಿಗೆ ಗೆಲುವಿನ ಅವಕಾಶ ಹೆಚ್ಚಿದೆ. ಸೋಲು ತಪ್ಪಿಸಿಕೊಳ್ಳುವ ಸವಾಲು ಪ್ರವಾಸಿ ಬಳಗದ ಮುಂದಿದೆ.

ಶ್ರೇಯಸ್ ಬ್ಯಾಟಿಂಗ್ ಮಿಂಚು: ಹತ್ತು ವರ್ಷಗಳ ಹಿಂದೆ ಲೆಗ್‌ಸ್ಪಿನ್ನರ್ ಆಗಿ ತಂಡಕ್ಕೆ ಪದಾರ್ಪಣೆ ಮಾಡಿದ್ದ ಶ್ರೇಯಸ್ ಹಂತಹಂತವಾಗಿ ಆಲ್‌ರೌಂಡರ್ ಆಗಿ ಬೆಳೆದಿದ್ದಾರೆ. ಈ ಟೂರ್ನಿಯ ಆರು ಇನಿಂಗ್ಸ್‌ಗಳಲ್ಲಿ ಅವರು ಒಟ್ಟು 48 ಓವರ್‌ಗಳನ್ನು ಮಾತ್ರ ಬೌಲಿಂಗ್ ಮಾಡಿದ್ದಾರೆ. ಆದರೆ ಶ್ರೇಯಸ್ ಇದರಿಂದ ವಿಚಲಿತರಾಗಿಲ್ಲ. ತಮ್ಮ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾದರು.

ರಾಜಸ್ಥಾನ ಎದುರು ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅವರು ಎರಡು ಮಹತ್ವದ ಜೊತೆಯಾಟಗಳಲ್ಲಿ ಪಾಲ್ಗೊಂಡರು. ಐದನೇ ವಿಕೆಟ್ ಜತೆಯಾಟದಲ್ಲಿ ಅವರು ಶರತ್ ಶ್ರೀನಿವಾಸ್ ಅವರೊಂದಿಗೆ 109 ರನ್‌ ಸೇರಿಸಿದರು. ಏಳನೇ ವಿಕೆಟ್ ಜೊತೆಯಾಟದಲ್ಲಿ ಮನೀಷ್ ಅವರೊಂದಿಗೆ 63 ರನ್‌ ಗಳಿಸಿದರು. ಇದರಲ್ಲಿ ಇಬ್ಬರೂ ತಲಾ 28 ರನ್‌ ಗಳಿಸಿದರು. ಏಳು ಇತರೆ ರನ್‌ಗಳಿದ್ದವು.

ಇದರಿಂದಾಗಿ ತಂಡದ ಮೊತ್ತವು ಮುನ್ನೂರರ ಗಡಿ ದಾಟಿತು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ಐದನೇ ಶತಕ ದಾಖಲಿಸುವತ್ತ ದಾಪುಗಾಲಿಟ್ಟಿದ್ದ ಶ್ರೇಯಸ್‌ಗೆ ರಾಜಸ್ಥಾನದ ವೇಗಿ ಅನಿಕೇತ್ ಚೌಧರಿ ತಡೆಯೊಡ್ಡಿದರು.

ಗಾಯದಲ್ಲಿ ಮಿಂಚಿದ ಪಾಂಡೆ: ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಮನೀಷ್ ಪಾಂಡೆ 10 ರನ್‌ ಗಳಿಸಿದ್ದ ಸಂದರ್ಭದಲ್ಲಿ ಸ್ಲಿಪ್ ಫೀಲ್ಡರ್ ಕೋಠಾರಿ ಕ್ಯಾಚ್ ಕೈಚೆಲ್ಲಿದ್ದರು. ಇದರಿಂದಾಗಿ ರನ್‌ ಗಳಿಕೆಯತ್ತ ವೇಗವಾಗಿ ಹೆಜ್ಜೆಹಾಕಿದರು. ಆದರೆ 47ನೇ ಓವರ್‌ನಲ್ಲಿ ಅರಾಫತ್ ಖಾನ್ ಎಸೆತವನ್ನು ಆಡಲು ಯತ್ನಿಸಿದರು. ಆದರೆ ಚೆಂಡು ಅವರ ಹೆಬ್ಬೆರಳಿಗೆ ಅಪ್ಪಳಿಸಿತು. ನೋವಿನಿಂದ ನರಳಿದ ಪಾಂಡೆ ‘ನಿವೃತ್ತಿ’ ಪಡೆದು ಚಿಕಿತ್ಸೆಗೆ ತೆರಳಿದರು.

ಈ ಸಂದರ್ಭದಲ್ಲಿ ಶ್ರೇಯಸ್ ಮತ್ತು ಶರತ್ ಇನಿಂಗ್ಸ್‌ ಕಟ್ಟಿದರು. 91ನೇ ಓವರ್‌ನಲ್ಲಿ ಶರತ್ (42 ರನ್) ಔಟಾದಾಗ ಮನೀಷ್ ಮತ್ತೆ ಕ್ರೀಸ್‌ಗೆ ಮರಳಿದರು. ರಾಜಸ್ಥಾನ ತಂಡದ ಬೌಲರ್‌ಗಳ ಎಸೆತಗಳನ್ನು ದಂಡಿಸಿದರು. ಮೂರು ಸಿಕ್ಸರ್‌ಗಳನ್ನು ಸಿಡಿಸಿದ ಅವರು ತಂಡದ ಮುನ್ನಡೆಯನ್ನು ಹಿಗ್ಗಿಸಿದರು.

ಮಯಂಕ್ ಅರ್ಧಶತಕ: ಮಂಗಳವಾರ ಸಂಜೆ 49 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ಮಯಂಕ್ ತಮ್ಮ ಎರಡನೇ ದಿನ ಬೆಳಿಗ್ಗೆ ಅರ್ಧಶತಕ ಪೂರೈಸಿ, ಅರಾಫತ್ ಖಾನ್ ಬೌಲಿಂಗ್‌ನಲ್ಲಿ ಔಟಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT