ನವದೆಹಲಿ: ಭಾರತ ಕ್ರಿಕೆಟ್ ತಂಡದ ಆರಂಭಿಕಬ್ಯಾಟ್ಸ್ಮನ್ ಶಿಖರ್ ಧವನ್, ಈ ವರ್ಷವೇ ಐಪಿಎಲ್ ನಡೆಯುವ ವಿಶ್ವಾಸದಲ್ಲಿದ್ದಾರೆ. ಮಾತ್ರವಲ್ಲದೆ, ಚುಟುಕು ಕ್ರಿಕೆಟ್ ಟೂರ್ನಿ ನಡೆಯುವುದುಅವಶ್ಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶ್ರೀಲಂಕಾದ ಆಲ್ರೌಂಡರ್ ಎಂಜಲೋ ಮ್ಯಾಥ್ಯೂಸ್ ಜೊತೆಗೆ ಇನ್ಸ್ಟಾಗ್ರಾಂ ಲೈವ್ನಲ್ಲಿ ಮಾತನಾಡಿರುವ ಧವನ್, ಕೋವಿಡ್–19 ಭಯದಲ್ಲಿರುವ ಜನರು, ಸೋಂಕಿನ ಗುಂಗಿನಿಂದ ಹೊರಬರಲು ಈ ಟೂರ್ನಿ ನಡೆಯಬೇಕು ಎಂದು ಹೇಳಿದ್ದಾರೆ. 2013 ರಿಂದ 2018ರ ವರೆಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ಪರಆಡಿದ್ದ ಧವನ್, 2019ರಲ್ಲಿ ತವರು ತಂಡ ಡೆಲಿ ಕ್ಯಾಪಿಟಲ್ಸ್ಗೆ ಮರಳಿದ್ದಾರೆ.
‘ಐಪಿಎಲ್ ನಡೆಯುವ ವಿಶ್ವಾಸದಲ್ಲಿದ್ದೇನೆ. ನಾನು ಯಾವಾಗಲೂ ಧನಾತ್ಮಕವಾಗಿ ಚಿಂತಿಸುತ್ತೇನೆ. ಟೂರ್ನಿಯು ನಡೆದರೆ ಖಂಡಿತಾ ಒಳ್ಳೆಯದಾಗುತ್ತದೆ. ಪ್ರತಿಯೊಬ್ಬರೂ ಸುರಕ್ಷತಾ ಕ್ರಮ ವಹಿಸುವುದು ಅಗತ್ಯ. ಒಂದು ವೇಳೆ ಇದು (ಐಪಿಎಲ್) ಸಾಧ್ಯವಾದರೆ, ಇದು ಸಾಕಷ್ಟು ಸಕಾರಾತ್ಮಕತೆಯನ್ನು ತರಲಿದೆ’ ಎಂದು ಹೇಳಿದ್ದಾರೆ.
‘ಪರಿಸ್ಥಿತಿ ಮತ್ತು ಮನಸ್ಥಿತಿಯನ್ನು ಸುಧಾರಿಸಲು ಕೆಲವು ಕ್ರೀಡೆಗಳತ್ತ ಮುಖಮಾಡುವುದು ಬಹಳ ಮುಖ್ಯ. ಐಪಿಎಲ್ಗೆ ವಾಪಸ್ ಆದರೆ, ಅದರ ಪರಿಣಾಮ ದೊಡ್ಡದಾಗಿರುತ್ತದೆ’ ಎಂದಿದ್ದಾರೆ.
ಮುಂದುವರಿದು, ಐಪಿಎಲ್ ನಡೆಯುತ್ತದೆ ಎಂದರೆ ಅದು ಎಂದಿನಂತೆಯೇ ಆಗಿರಲಿದೆ ಎಂದೂ ಅಲ್ಲ ಎಂದಿದ್ದಾರೆ. ಕ್ರೀಡಾಂಗಣಗಳಲ್ಲಿ ಕುಳಿತು ಪಂದ್ಯ ವೀಕ್ಷಿಸಲುಪ್ರೇಕ್ಷಕರಿಗೆ ಅವಕಾಶ ನೀಡದೆಖಾಲಿ ಕ್ರೀಡಾಂಗಣಗಳಲ್ಲಿ ಐಪಿಎಲ್ ನಡೆಸುವ ಸಾಧ್ಯತೆ ಇದೆ. ಇದೇ ರೀತಿಯಲ್ಲಿ ದೇಶದಾದ್ಯಂತ ಸಾಕಷ್ಟು ಕ್ರೀಡಾಂಗಣಗಳನ್ನು ತೆರೆಯಲಾಗಿದೆ. ಈ ಅಂಶವು ಐಪಿಎಲ್ ನಡೆಯುವ ವಿಶ್ವಾಸ ಹೆಚ್ಚಿಸಿದೆ.
ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ನಡೆಸುವ ಯೋಜನೆ ಬಗ್ಗೆ ಈ ಹಿಂದೆ ಮಾತನಾಡಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ‘ಪ್ರೇಕ್ಷಕರಿಲ್ಲದೆ ಪಂದ್ಯವಾಡಿದರೆ,ಆಟದ ಮೋಹಕತೆ ಕಳೆದುಕೊಂಡಂತಾಗುತ್ತದೆ’ಎಂದಿದ್ದರು. ಕೊಹ್ಲಿಯ ಆ ಮಾತನ್ನು ಒಪ್ಪಿರುವ ಧವನ್, ‘ಪಂದ್ಯಗಳು ಮುಚ್ಚಿದ ಬಾಗಿಲಿನಲ್ಲಿ ನಡೆದರೆ, ತಮ್ಮದೇ ಸೆಳೆತ, ಮೋಡಿ ಸೃಷ್ಟಿಸಬಲ್ಲಅಭಿಮಾನಿಗಳು ಮತ್ತು ಅಪಾರ ಜನರ ನಡುವೆ ಆಡುವ ಅವಕಾಶವನ್ನು ನಾವು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಲಿದ್ದೇವೆ. ಆದರೆ, ಈ ಸಂದರ್ಭವು ಕಳೆದ 2 ತಿಂಗಳಿನಿಂದ ಮನೆಯಲ್ಲೇ ಉಳಿದಿದ್ದ ನಾವುಹೊರಬರುವ ಅವಕಾಶ ನೀಡಲಿದೆ’ ಎಂದು ಹೇಳಿದ್ದಾರೆ.
‘ಒಂದು ಬಾರಿ ಆಟಕ್ಕೆ ಮರಳಿದರೆ, ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಲು ಹಾತೊರೆಯಲಿದ್ದೇವೆ. ಇದು ಮೋಜಿನ ಸಂಗತಿಯಾಗಿದೆ. ನಾವು ಆಟವನ್ನು ಮುಂದುವರಿಸುವುದರಿಂದ ಧನಾತ್ಮಕತೆಮೂಡಲಿದೆ’ ಎಂದು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.