ಕೊಲಂಬೊ: ಭಾರತ ಕ್ರಿಕೆಟ್ ತಂಡದ ಶ್ರೀಲಂಕಾ ಪ್ರವಾಸ ಕುರಿತಂತೆ ಅನಿಶ್ಚಿತತೆ ಮುಂದುವರಿದಿದೆ. ಜುಲೈನಲ್ಲಿ ನಿಗದಿಯಾಗಿರುವ ಈ ಸರಣಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು (ಎಸ್ಎಲ್ಸಿ) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮನವಿ ಮಾಡಿದೆ.
ಮೂರು ಏಕದಿನ ಹಾಗೂ ಟ್ವೆಂಟಿ–20 ಪಂದ್ಯಗಳ ಸರಣಿಯನ್ನು ಆಡಲು ಭಾರತ ತಂಡ ಲಂಕಾಕ್ಕೆ ತೆರಳಬೇಕಿದೆ. ಆದರೆ ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಸರಣಿಯ ಮೇಲೆ ಕಾರ್ಮೋಡ ಕವಿದಿದೆ.
ಈ ಕುರಿತು ಎಸ್ಎಲ್ಸಿ, ಬಿಸಿಸಿಐಗೆ ಸಂದೇಶ ಕಳುಹಿಸಿದೆ. ಸರಣಿ ನಡೆಯಬೇಕೆಂದು ತಾನು ಬಯಸಿದ್ದು ಬಿಸಿಸಿಐನ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇವೆ’ ಎಂದು ಎಸ್ಎಲ್ಸಿ ಹೇಳಿದ್ದಾಗಿ ‘ದ ಐಲ್ಯಾಂಡ್’ ಪತ್ರಿಕೆ ಉಲ್ಲೇಖಿಸಿದೆ.
‘ಕ್ವಾರಂಟೈನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಬಹುದು’ ಎಂದು ಎಸ್ಎಲ್ಸಿ ಹೇಳಿದೆ.
ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಹಾಗೂ ಪ್ರವಾಸಿ ನಿರ್ಬಂಧಗಳ ಕುರಿತಂತೆ ಸಲಹೆಗಳು ಬರುವವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಹಂತದಲ್ಲಿ ಬಿಸಿಸಿಐ ಇಲ್ಲ. ಈ ಸರಣಿ ನಡೆಯದಿದ್ದರೆ ಶ್ರೀಲಂಕಾ ಕ್ರಿಕೆಟ್ಗೆ ಭಾರಿ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ.