ಮುಂಬೈ:ಏಕದಿನ ಕ್ರಿಕೆಟ್ ವಿಶ್ವಕಪ್ ಮುಂದಿನ ವರ್ಷ ಇಂಗ್ಲೆಂಡ್ನಲ್ಲಿ ನಡೆ ಯಲಿದೆ. ಆ ಟೂರ್ನಿಯಲ್ಲಿ ಆಡಲಿರುವ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಏನೇನು ಬೇಕು ಗೊತ್ತೇ?
‘ಪತ್ನಿಯನ್ನು ಕರೆದುಕೊಂಡು ಹೋಗಲು ಅನುಮತಿ ನೀಡಬೇಕು. ಇಂಗ್ಲೆಂಡ್ನಲ್ಲಿ ಪ್ರಯಾಣಿಸಲು ರೈಲುಗಳಲ್ಲಿ ಪ್ರತ್ಯೇಕ ಬೋಗಿಗಳನ್ನು ಕಾಯ್ದಿರಿಸಬೇಕು. ಜಿಮ್ನಾಷಿಯಂ ಮತ್ತಿತರ ಸೌಲಭ್ಯಗಳೂ ಇರುವ ಹೋಟೆಲ್ಗಳಲ್ಲಿ ತಂಗಲು ವ್ಯವಸ್ಥೆ ಮಾಡಬೇಕು. ಆಟಗಾರರಿಗೆ ತಿನ್ನಲು ಬಾಳೆಹಣ್ಣುಗಳನ್ನು ಹೆಚ್ಚಿನ ಪ್ರಮಾಣ ದಲ್ಲಿ ನೀಡಬೇಕು’ ಎಂಬ ಬೇಡಿಕೆಗಳನ್ನು ಭಾರತ ತಂಡವು ಬಿಸಿಸಿಐ ಮುಂದಿಟ್ಟಿದೆ.
ಈ ಹಿಂದೆ ಇಂಗ್ಲೆಂಡ್ ಪ್ರವಾಸ ಪಂದ್ಯದಲ್ಲಿ ಭಾರತದ ಪ್ರದರ್ಶನ ಕಳಪೆಯಾಗಿದ್ದರಿಂದ ಬಿಸಿಸಿಐ ಅವ ಲೋಕನ ಸಭೆ ಕರೆದಿತ್ತು.ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ ಪ್ರಸಾದ್, ಕೋಚ್ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಂಜಿಕ್ಯ ರೆಹಾನೆ ಮೊದಲಾದವರು ಈ ಸಭೆ ಯಲ್ಲಿ ಪಾಲ್ಗೊಂಡಿದ್ದರು.
ಆದರೆ, ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡದ ಆಯ್ಕೆ ಇನ್ನೂ ಆಗಿಲ್ಲ. ನವೆಂಬರ್–ಡಿಸೆಂಬರ್ನಲ್ಲಿ ಆಸ್ಟ್ರೇ ಲಿಯಾ ಪ್ರವಾಸಕ್ಕೆ ಭಾರತ ತಂಡವು ತೆರಳಲಿದೆ. ವಿದೇಶ ಪ್ರವಾಸಗಳಲ್ಲಿ ತಮ್ಮ ಪತ್ನಿ ಮತ್ತು ಕುಟುಂಬದ ಸದಸ್ಯರನ್ನು ಕರೆದೊಯ್ಯುವಂತಿಲ್ಲ ಎಂದು
ಬಿಸಿಸಿಐ ಈಚೆಗೆ ನಿಯಮ ಮಾಡಿತ್ತು.
ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಅತ್ಯಗತ್ಯ: ಗಾವಸ್ಕರ್
ಮುಂದಿನ ವರ್ಷ ನಡೆಯಲಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡಕ್ಕೆ ಮಹೇಂದ್ರಸಿಂಗ್ ಧೋನಿಯ ಅಗತ್ಯ ಇದೆ. ನಾಯಕ ವಿರಾಟ್ ಕೊಹ್ಲಿ ಅವರಿಗೆ ಧೋನಿ ಮಾರ್ಗದರ್ಶನ ಅತ್ಯವಶ್ಯ ಎಂದು ಹಿರಿಯ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಟಿ.ವಿ. ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
‘ಒತ್ತಡವನ್ನು ನಿಭಾಯಿಸಲು ಹಾಗೂ ನಾಯಕನಿಗೆ ಮಾರ್ಗದರ್ಶನ ನೀಡಲು ಧೋನಿ ಅನುಭವ ಮಹತ್ವದ ಪಾತ್ರ ವಹಿಸಲಿದೆ. ಏಕದಿನ ಕ್ರಿಕೆಟ್ನಲ್ಲಿ ಅವರ ಅನುಭವ ಅಮೂಲ್ಯವಾದದ್ದು. ಕ್ಷೇತ್ರರಕ್ಷಣೆ, ಬೌಲರ್ಗಳ ಬದಲಾವಣೆ ವಿಷಯಗಳಲ್ಲಿ ಅವರು ನೀಡುವ ಸಲಹೆಗಳು ಮಹತ್ವದ ಪಾತ್ರ ವಹಿಸುತ್ತವೆ.
ವಿಕೆಟ್ ಹಿಂದೆ ಅವರ ಚುರುಕುತನ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೆಚ್ಚಿಸುತ್ತದೆ. ಅಲ್ಲದೇ ಬೌಲರ್ಗಳಿಗೆ ಅವರು ಹಿಂದಿಯಲ್ಲಿ ಕೊಡುವ ಸಲಹೆಗಳು ಗಮನಾರ್ಹ. ಯಾವ ಬ್ಯಾಟ್ಸ್ಮನ್ಗೆ ಯಾವ ರೀತಿಯಲ್ಲಿ ಎಸೆತಗಳನ್ನು ಹಾಕಬೇಕು ಎಂದು ಅವರು ನೀಡುವ ಸೂಚನೆಗಳು ಮಹತ್ವದ್ದಾಗಿವೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.