ದುಬೈ: ನಿರ್ಣಾಯಕ ಆರನೇ ಕ್ರಮಾಂಕದಲ್ಲಿ ಫಿನಿಶರ್ ಹೊಣೆ ನಿಭಾಯಿಸುತ್ತಿರುವ ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರನ್ನು ರಾತ್ರೋರಾತ್ರಿ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಐಸಿಸಿ ಟ್ವೆಂಟಿ-20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಪ್ರತಿಕ್ರಿಯಿಸಿರುವ ಕೊಹ್ಲಿ, ಪಾಂಡ್ಯ ಬೌಲಿಂಗ್ ಮಾಡದಿದ್ದರೂ ಅವರ ಸ್ಥಾನವನ್ನು ಸರಿದೂಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
2019ರಲ್ಲಿ ಬೆನ್ನು ನೋವಿನಿಂದಾಗಿ ಶಸ್ತ್ರಚಿಕಿತ್ಸೆಗೊಳಗಾಗಿರುವ ಪಾಂಡ್ಯ, ಅಲ್ಲಿಂದ ಬಳಿಕ ನಿಯಮಿತವಾಗಿ ಬೌಲಿಂಗ್ ನಡೆಸುತ್ತಿಲ್ಲ. ಆದರೂ ಸ್ಟಾರ್ ಆಟಗಾರನ ಬೆಂಬಲಕ್ಕೆ ನಿಂತಿರುವ ಕೊಹ್ಲಿ, ಆಲ್ರೌಂಡರ್ ಆಟಗಾರನ ಸಾಮರ್ಥ್ಯದ ಮೇಲೆ ಸಂಪೂರ್ಣ ನಂಬಿಕೆಯನ್ನಿರಿಸಿದ್ದಾರೆ.
'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಹಾರ್ದಿಕ್ ಪಾಂಡ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ವಿಶ್ವಕಪ್ನ ಒಂದು ನಿರ್ದಿಷ್ಟ ಹಂತದಲ್ಲಿ ಎರಡು ಓವರ್ಗಳನ್ನು ಬೌಲಿಂಗ್ ಮಾಡಬಲ್ಲರು ಎಂಬ ಭಾವನೆ ನನ್ನಲ್ಲಿದೆ' ಎಂದು ತಿಳಿಸಿದರು.
ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸ್ವತಃ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿದ್ದರು. ಈ ಕುರಿತು ಕೇಳಿದಾಗ, ಹಾರ್ದಿಕ್ ಬೌಲಿಂಗ್ ಪ್ರಾರಂಭಿಸುವವರೆಗೂ ನಾವು ನಮಗೆ ದೊರಕುವ ಹೆಚ್ಚಿನ ಅವಕಾಶ ಬಳಸಿಕೊಳ್ಳಬೇಕು ಎಂದು ಹೇಳಿದರು.
'ನಾವು ಒಂದರೆಡು ಓವರ್ ಬೌಲಿಂಗ್ ಮಾಡಲು ಕೆಲವು ಆಯ್ಕೆಗಳನ್ನು ಪರಿಗಣಿಸಿದ್ದೇವೆ. ಹಾಗಾಗಿನಾವು ಆ ಬಗ್ಗೆ ಚಿಂತಿತರಾಗಿಲ್ಲ. ಹಾರ್ದಿಕ್ ಸ್ಥಾನವನ್ನು ರಾತ್ರೋರಾತ್ರಿ ಸೃಷ್ಟಿಸಲು ಸಾಧ್ಯವಿಲ್ಲ' ಎಂದು ಹೇಳಿದರು.
ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿದ್ದರೆ ಅವರನ್ನು ಕೈಬಿಡಬೇಕೇ? ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿದೆ. ಆದರೆ ಆರನೇ ಕ್ರಮಾಂಕದಲ್ಲಿ ಅವರು ತಂಡಕ್ಕೆ ತಂದ ಮೌಲ್ಯವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ವಿಶ್ವ ಕ್ರಿಕೆಟ್ನತ್ತ ನೋಡಿದರೆ ಸ್ಷೆಷಲಿಸ್ಟ್ ಆಟಗಾರರು ಫಿನಿಶರ್ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ ಎಂದು ಹೇಳಿದರು.