ಕೋಲ್ಕತ್ತ: ಜಿಂದಾಲ್ ಸ್ಟೀಲ್ ವರ್ಕ್ಸ್ (ಜೆಎಸ್ಡಬ್ಲ್ಯು) ಸಂಸ್ಥೆಯು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅವರನ್ನು ಜೆಎಸ್ಡಬ್ಲ್ಯು ಸಿಮೆಂಟ್ನ ಪ್ರಚಾರ ರಾಯಭಾರಿಗಳನ್ನಾಗಿ ನೇಮಿಸಿದೆ.
ಭಾರತದ ಪಶ್ಚಿಮ ಭಾಗದ ರಾಜ್ಯಗಳಿಗೆ ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶದಿಂದ ಜೆಎಸ್ಎಬ್ಲ್ಯು ಈ ನಿರ್ಧಾರ ಕೈಗೊಂಡಿದೆ.
‘ಜೆಎಸ್ಡಬ್ಲ್ಯು ವಿಶ್ವಾಸಾರ್ಹ ಕಂಪನಿ. ಗುಣಮಟ್ಟದಲ್ಲೂ ಮುಂಚೂಣಿಯಲ್ಲಿದೆ. ಈ ಸಂಸ್ಥೆಯ ಪ್ರಚಾರ ರಾಯಭಾರಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಸಂತಸವಾಗಿದೆ’ ಎಂದು ಗಂಗೂಲಿ ತಿಳಿಸಿದ್ದಾರೆ.
‘ಜೆಎಸ್ಡಬ್ಲ್ಯು ಸಂಸ್ಥೆಯು ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿದೆ. ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಈ ಸಂಸ್ಥೆಯ ಪ್ರಚಾರ ರಾಯಭಾರಿಯಾಗಿರುವುದಕ್ಕೆ ಖುಷಿ ಇದೆ’ ಎಂದು ಚೆಟ್ರಿ ಹೇಳಿದ್ದಾರೆ.
ಚೆಟ್ರಿ ಅವರು ಜೆಎಸ್ಡಬ್ಲ್ಯು ಒಡೆತನದ ಬೆಂಗಳೂರು ಫುಟ್ಬಾಲ್ ಕ್ಲಬ್ನ (ಬಿಎಫ್ಸಿ) ನಾಯಕರೂ ಆಗಿದ್ದಾರೆ. ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್), ಐ ಲೀಗ್ ಸೇರಿದಂತೆ ಹಲವು ಟೂರ್ನಿಗಳಲ್ಲಿ ಈ ತಂಡ ಪ್ರಶಸ್ತಿ ಗೆದ್ದಿದೆ.