ಮಂಗಳೂರು: ನಗರದ ಜೆಮ್ ಎಫ್ಸಿ ಮತ್ತು ಕಸಬಾ ಎಫ್ಸಿ ತಂಡಗಳು ದಿವಂಗತ ಸರೋಜಿನಿ ಪುಂಡಲೀಕ ಕರ್ಕೇರ ಬೆಂಗ್ರೆ ಸ್ಮಾರಕ ದಕ್ಷಿಣ ಭಾರತ ಆಹ್ವಾನಿತ ಫುಟ್ಬಾಲ್ ಟೂರ್ನಿ ‘ಬಿವಿಎಸ್ ಅಮೃತ ಮಹೋತ್ಸವ ಟ್ರೋಫಿ’ಯ ಪಂದ್ಯಗಳಲ್ಲಿ ಗೆಲುವು ಸಾಧಿಸಿದವು.
ನಗರದ ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಅಮೃತ ಮಹೋತ್ಸವದ ಅಂಗವಾಗಿ ನೆಹರೂ ಮೈದಾನದಲ್ಲಿ ಭಾನುವಾರ ಆರಂಭಗೊಂಡ ಟೂರ್ನಿಯಲ್ಲಿ ಜೆಮ್ ಎಫ್ಸಿ 1–0ಯಿಂದ ಯೆನೆಪೋಯ ಎಫ್ಸಿಯನ್ನು, ಕಸಬಾ ಎಫ್ಸಿ 1–0ಯಿಂದ ಬೋಳಾರ್ ಎಫ್ಸಿಯನ್ನು ಮಣಿಸಿತು.
ಯೆನೆಪೋಯ ಮತ್ತು ಜೆಮ್ ನಡುವಿನ ಪಂದ್ಯ ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. 23ನೇ ನಿಮಿಷದಲ್ಲಿ ಅಲ್ಫಜ್ ಗಳಿಸಿದ ಗೋಲಿನ ಮೂಲಕ ಮುನ್ನಡೆ ಸಾಧಿಸಿದ ಜೆಮ್ ಎಫ್ಸಿ ನಂತರ ರಕ್ಷಣೆಗೆ ಒತ್ತು ನೀಡಿತು. ಎದುರಾಳಿಗಳ ಆವರಣಕ್ಕೆ ನುಗ್ಗಲು ಸತತ ಪ್ರಯತ್ನ ನಡೆಸಿದರೂ ಲಭಿಸಿದ ಅವಕಾಶಗಳನ್ನು ಕೈಚೆಲ್ಲಿದ ಯೆನೆಪೋಯ ಸೋಲೊಪ್ಪಿಕೊಂಡಿತು.
ಎರಡನೇ ಪಂದ್ಯದಲ್ಲಿ ಜಿದ್ದಾಜಿದ್ದಿಯ ಹೋರಾಟ ಕಂಡುಬಂತು. 70 ನಿಮಿಷಗಳ ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ 7 ನಿಮಿಷ ಬಾಕಿ ಇದ್ದಾಗ ಆಶಿರ್, ಚೆಂಡನ್ನು ಗುರಿ ಮುಟ್ಟಿಸಿ ಕಸಬಾ ಎಫ್ಸಿ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.
ಸೋಮವಾರ ಮಧ್ಯಾಹ್ನ 3 ಗಂಟೆಗೆ ಆತಿಥೇಯ ಬಿವಿಎಸ್ ಬೆಂಗ್ರೆ ಎಫ್ಸಿ ಮತ್ತು ಮರ್ಚಂಟ್ ಎಫ್ಸಿ ನಡುವೆ, 4.30ಕ್ಕೆ ಸ್ಪೋರ್ಟಿಂಗ್ ಬ್ರದರ್ಸ್ ಎಫ್ಸಿ ಮತ್ತು ಅಜಾರಿಯ ಎಫ್ಸಿ ನಡುವೆ ಹಣಾಹಣಿ ನಡೆಯಲಿದೆ.
ಬಿವಿಎಸ್ ಟ್ರೋಫಿ ಫುಟ್ಬಾಲ್ ಟೂರ್ನಿಯಲ್ಲಿ ಯೆನೆಪೋಯ ಎಫ್ಸಿ ಎದುರಿನ ಪಂದ್ಯದಲ್ಲಿ ಜೆಮ್ ಎಫ್ಸಿಯ ರತಿನ್ ಚೆಂಡಿನೊಂದಿಗೆ ಮುನ್ನುಗ್ಗಿದರು