ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಾಕಿ ಮಾಂತ್ರಿಕ’ ಧ್ಯಾನಚಂದ್ ನೆನಪಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Last Updated 28 ಆಗಸ್ಟ್ 2021, 20:15 IST
ಅಕ್ಷರ ಗಾತ್ರ

‘ನಾನು ಭಾರತದ ಒಬ್ಬ ಸಾಮಾನ್ಯ ನಾಗರಿಕ..’

ಅಪ್ಪ ತಮ್ಮ ಪುಸ್ತಕ ‘ಗೋಲ್‌’ನಲ್ಲಿ ಹೀಗೆ ಬರೆದಿದ್ದಾರೆ. ತಮ್ಮ ಜೀವನದುದ್ದಕ್ಕೂ ಅವರು ಬದುಕಿದ್ದು ಹಾಗೆಯೇ. ಸರಳ, ಸಜ್ಜನಿಕೆ, ಸ್ವಾಭಿಮಾನ ಮತ್ತು ದೇಶಭಕ್ತಿ ಅವರ ಜೀವನಶೈಲಿಯಾಗಿತ್ತು. ಯಾವತ್ತೂ ಆಡಂಬರ ಅಥವಾ ತೋರಿಕೆಯ ಜೀವನ ಮಾಡಲೇ ಇಲ್ಲ. ಆದರೆ ನನಗೆ ಇವತ್ತಿಗೂ ಅವರ ಬದುಕಿನ ಬಗ್ಗೆ ಅಚ್ಚರಿ ಮತ್ತು ಅಭಿಮಾನಗಳು ಏಕಕಾಲಕ್ಕೆ ಮೂಡುತ್ತವೆ. ಏಕೆಂದರೆ ತಮ್ಮನ್ನು ಸಾಮಾನ್ಯ ವ್ಯಕ್ತಿ ಎಂದೇ ಪರಿಗಣಿಸಿಕೊಂಡಿದ್ದವರು ಹೊರಜಗತ್ತಿಗೆ ‘ಹಾಕಿ ಮಾಂತ್ರಿಕ’ನಾಗಿದ್ದಾರೆ. ಪ್ರತಿಯೊಬ್ಬ ಕ್ರೀಡಾಪ್ರೇಮಿಯ ಮನದಲ್ಲಿ ನೆಲೆಸಿದ್ದಾರೆ. ಇವತ್ತು ಅವರ 116ನೇ ಜಯಂತಿ. ಇಡೀ ದೇಶವೇ ಅವರ ನೆನಪಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸುತ್ತಿದೆ.

ದೇಶದ ಸ್ವಾತಂತ್ರ್ಯಪೂರ್ವದಲ್ಲಿ ಅವರು ಹಾಕಿ ಕ್ರೀಡೆಯಲ್ಲಿ ಮಾಡಿದ ಸಾಧನೆಯನ್ನು ಸ್ವಾತಂತ್ರ್ಯ ಸಿಕ್ಕು 75 ವರ್ಷಗಳ ನಂತರವೂ ದೇಶವು ಸಂಭ್ರಮಿಸುತ್ತಿದೆ. ಈ ಸುದೀರ್ಘ ಅವಧಿಯಲ್ಲಿ ದೇಶದಲ್ಲಿ ಬಹಳಷ್ಟು ಸ್ಥಿತ್ಯಂತರಗಳು ಆಗಿವೆ. ಹಲವಾರು ಖ್ಯಾತನಾಮರು ಬೆಳಗಿದ್ದಾರೆ. ಇದರಲ್ಲಿ ಕ್ರೀಡಾಕ್ಷೇತ್ರವೂ ಸೇರಿದೆ. ತಾರೆಗಳು ಮಿನುಗುತ್ತಲೇ ಇವೆ. ಆದರೆ ಅಪ್ಪನ ಧ್ಯಾನ ಮಾತ್ರ ನಿರಂತರವಾಗಿದೆ. ಒಬ್ಬ ‘ಸಾಮಾನ್ಯ’ ವ್ಯಕ್ತಿ ಅಜರಾಮರವಾಗಿರಲು ಹೇಗೆ ಸಾಧ್ಯ?

ಅದಕ್ಕೆ ಕಾರಣ ಅವರು ಈ ದೇಶಕ್ಕೆ ನೀಡಿದ ಅಮೂಲ್ಯ ಕೊಡುಗೆ. ಅವರ ಆಟದಲ್ಲಿ ಅರಳಿದ 1928, 1932 ಮತ್ತು 1936ರ ಒಲಿಂಪಿಕ್ಸ್‌ ವಿಜಯಗಳು ದಂತಕಥೆಗಳಾಗಿವೆ. ಅವರ ಪ್ರೇರಣೆಯಿಂದಾಗಿಯೇ 1947ರ ನಂತರ ಕಿಶನ್‌ ಲಾಲ್ ದಾದಾ, ಕೆ.ಡಿ. ಸಿಂಗ್ ಬಾಬು, ಬಲ್ಬೀರ್ ಸಿಂಗ್ ಸೀನಿಯರ್, ಲೆಸ್ಲಿ ಕ್ಲಾಡಿಯಸ್, ಸರದಾರ್ ಉಧಮ್ ಸಿಂಗ್, ಚರಣ್ ಸಿಂಗ್ ಮತ್ತು ವಿ. ಭಾಸ್ಕರನ್ ಅವರಂತಹ ಚಿನ್ನದ ಪದಕ ವಿಜೇತ ನಾಯಕರು ಉದಯಿಸಿದರು.

1980ರ ನಂತರ ನಾಲ್ಕು ದಶಕಗಳ ಕಾಲ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಒಲಿಯಲಿಲ್ಲ. ಆದರೆ ಆ ಕಾಲದಲ್ಲಿಯೂ ಹಾಕಿ ಉಳಿಯಲು ಮತ್ತು ಬೆಳೆಯಲು ಕೂಡ ಆ ಎಂಟು ಚಿನ್ನದ ಪದಕಗಳ ಕಥೆಗಳೇ ಸ್ಫೂರ್ತಿದಾಯಕವಾದವು. ಅದಕ್ಕೆ ಮೂಲಪುರುಷ ಮೇಜರ್ ಧ್ಯಾನಚಂದ್. ಇತ್ತೀಚೆಗಷ್ಟೇ ಭಾರತ ತಂಡವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿತು. 41 ವರ್ಷಗಳ ಪದಕದ ಬರ ನೀಗಿತು. ಮಹಿಳಾ ಹಾಕಿ ತಂಡವೂ ವೀರೊಚಿತವಾಗಿ ಆಡಿ ಜನಮನ ಗೆದ್ದಿತು. ಈ ಸಂದರ್ಭದಲ್ಲಿಯೂ ಧ್ಯಾನಚಂದ್ ಅವರ ನೆನಪು ಅನುರಣಿಸಿತು.

ಆದರೆ ನನ್ನ ಪ್ರಾಮಾಣಿಕ ಅನಿಸಿಕೆಯಂತೆ, ಅಪ್ಪ ಕೇವಲ ತಮ್ಮ ಆಟ, ಗಳಿಸಿದ ಗೋಲುಗಳ ಸಂಖ್ಯೆಯಿಂದ ಮಾತ್ರ ಧ್ಯಾನಚಂದ್‌ ಆಗಿ ರೂಪುಗೊಳ್ಳಲಿಲ್ಲ. ಅದರಾಚೆಗೆ ಇದ್ದ ಅವರ ವ್ಯಕ್ತಿತ್ವ, ಜೀವನ ಶೈಲಿಯ ಪಾತ್ರವೂ ಬಹಳ ದೊಡ್ಡದು. ಈಗಿನ ಕ್ರೀಡಾಪಟುಗಳಿಗೆ ಸಾಧನೆ ಮಾಡಿದರೆ ಕೋಟಿಗಟ್ಟಲೇ ಹಣ, ಉದ್ಯೋಗಗಳು ಲಭಿಸುತ್ತವೆ. ಆ ಕಾಲದಲ್ಲಿ ಏನೂ ಇರಲಿಲ್ಲ. ಹಾಗೆಂದು ಅಪ್ಪನಾಗಲೀ, ಚಿಕ್ಕಪ್ಪ ರೂಪ್‌ ಸಿಂಗ್ ಅವರಾಗಲೀ ತಮ್ಮತನವನ್ನು ಬಿಟ್ಟುಕೊಟ್ಟವರಲ್ಲ. ಪ್ರಶಸ್ತಿ, ಪುರಸ್ಕಾರ, ಉದ್ಯೋಗ, ಹಣಕ್ಕಾಗಿ ಯಾರ ಮುಂದೆಯೂ ಹೋಗಿ ನಿಲ್ಲಲಿಲ್ಲ.ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದಾಗ ಜರ್ಮನಿಯ ಅಡಾಲ್ಫ್ ಹಿಟ್ಲರ್ ಕೊಟ್ಟ ಆಹ್ವಾನವನ್ನೇ ಸಾರಾಸಗಟಾಗಿ ತಿರಸ್ಕರಿದ್ದ ಅವರ ಸ್ವಾಭಿಮಾನ ಮತ್ತು ದೇಶಾಭಿಮಾನಕ್ಕೆ ಸಾಟಿಯುಂಟೆ. ಅವತ್ತು ಮನಸ್ಸು ಮಾಡಿದ್ದರೆ ಜರ್ಮನಿಯ ಸೇನೆಯ ದೊಡ್ಡ ಹುದ್ದೆ, ಅಲ್ಲಿಯ ನಾಗರಿಕತ್ವ ಪಡೆದು ಇದ್ದುಬಿಡಬಹುದಿತ್ತು. ಆದರೆ ಹಾಗೆ ಮಾಡಿದ್ದರೆ ಬಹುಶಃ ಧ್ಯಾನಚಂದ್ ಅಮರರಾಗುತ್ತಿರಲಿಲ್ಲ.

ಮೀರತ್‌ನಲ್ಲಿ ಸೇನೆಯಿಂದ ನಿವೃತ್ತರಾದ ನಂತರ ನಮ್ಮ ಕುಟುಂಬ ಝಾನ್ಸಿಯಲ್ಲಿ ಕೆಲಕಾಲ ನೆಲೆಸಿತ್ತು. ಆದರೆ ನೌಕರಿಗಾಗಿ ಅವರು ನಮ್ಮನ್ನೆಲ್ಲ ಕರೆದುಕೊಂಡು ದೆಹಲಿಗೆ ಬಂದು ನೆಲೆಸಿದರು. ನಾವು ಚಿಕ್ಕವರಾಗಿದ್ದ ಕಾಲದಲ್ಲಿ ದೇಶದಲ್ಲಿ ಹಾಕಿ ಕ್ರೀಡೆ ಜನಪ್ರಿಯವಾಗಿತ್ತು. ನಮಗೂ ಆಡುವ ಆಸೆ ಇತ್ತು. ಆದರೆ, ನಾನಾಗಲೀ, ಸಹೋದರ ರಾಜಕುಮಾರನಾಗಲೀ ಹಾಕಿ ಆಡುವುದು ಅಪ್ಪನಿಗೆ ಇಷ್ಟವಿರಲಿಲ್ಲ. ಆದರೆ ವಿಧಿಲಿಖಿತ ಬೇರೆಯೇ ಇತ್ತು. ನಾವಿಬ್ಬರೂ ಅವರಿಗೆ ಗೊತ್ತಿಲ್ಲದಂತೆ ಹಾಕಿಪಟುಗಳಾಗಿ ರೂಪುಗೊಂಡೆವು. ಅಣ್ಣ ನನಗಿಂತಲೂ ಚೆನ್ನಾಗಿ ಆಡುತ್ತಿದ್ದ. ಆದರೆ, ಅಪ್ಪ, ಚಿಕ್ಕಪ್ಪ ಇಬ್ಬರೂ ಹಾಕಿ ಆಯ್ಕೆ ಸಮಿತಿಯಲ್ಲಿದ್ದರು. ಸ್ವಜನಪಕ್ಷಪಾತಕ್ಕೆ ಅವಕಾಶ ಕೊಡದೇ ನಮ್ಮಷ್ಟೇ ಚೆನ್ನಾಗಿ ಆಡುತ್ತಿದ್ದ ಬೇರೆ ಮಕ್ಕಳಿಗೆ ಮಣೆ ಹಾಕುತ್ತಿದ್ದರು.ಅದರಿಂದಾಗಿ ನಾವು ಬಂಗಾಳ ಹಾಕಿ ತಂಡದಲ್ಲಿ ಆಡಿದೆವು. ನಮ್ಮ ಪಂದ್ಯಗಳನ್ನು ನೋಡಲು ಅವರು ಒಮ್ಮೆಯೂ ಬರಲಿಲ್ಲ. ನಾನು ಏಷ್ಯನ್ ಗೇಮ್ಸ್‌ನಲ್ಲಿ ಆಡಿದಾಗಲೂ ಅವರು ಪಂದ್ಯ ನೋಡಿರಲಿಲ್ಲ. ಆದರೆ ಒಂದು ಸಲ ಬೆಂಗಳೂರಿನಲ್ಲಿ ನಡೆದಿದ್ದ ರಾಷ್ಟ್ರೀಯ ಟೂರ್ನಿಯಲ್ಲಿ ಆಡಿದ್ದೆವು. ಆ ಟೂರ್ನಿಗೆ ಆಯೋಜಕರು ಅಪ್ಪ ಮತ್ತು ಚಿಕ್ಕಪ್ಪನನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ್ದರು. ಆಗ ಪತ್ರಕರ್ತರು, ಮಗನ ಆಟದ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದ್ದರು. ಅದಕ್ಕೆ ಅವರು, ‘ಹಾಕಿಯಲ್ಲಿ ಅವರು ಕಲಿಯುವುದು ಇನ್ನೂ ಬಹಳಷ್ಟಿದೆ’ ಎಂದಿದ್ದರು.

ವೈಯಕ್ತಿಕ ಜೀವನದಲ್ಲಿ ಸಂಕಷ್ಟ ಎದುರಾದಾಗಲೂ ಅವರೂ ಬಾಗಿದವರಲ್ಲ. ನನಗಿನ್ನೂ ನೆನಪಿದೆ. ಅವರಿಗೆ ಕ್ರೀಡಾಕೋಟಾದಲ್ಲಿ ಪೆಟ್ರೋಲ್ ಬಂಕ್, ಗ್ಯಾಸ್ ಏಜನ್ಸಿ ಸಿಗುವುದಿತ್ತು. ನಾನೇ ಅರ್ಜಿ ನಮೂನೆಯನ್ನು ತುಂಬಿ ಅವರ ಮುಂದೆ ಸಹಿ ಮಾಡಲು ಇಟ್ಟೆ. ಏನಿದು ಎಂದು ಕೇಳಿದರು. ವಿವರಿಸಿದೆ. ‘ನಾನು ಅವರ (ಸರ್ಕಾರ)ಬಳಿ ಭಿಕ್ಷೆ ಬೇಡಬೇಕಾ. ನಾನು ಅರ್ಹನಾಗಿದ್ದರೆ ಕೊಡಲಿ, ಇಲ್ಲಾ ಬಿಡಲಿ’ ಎಂದು ಗುಡುಗಿದ್ದರು. ನಾನು ಅರ್ಜಿಯನ್ನು ಹರಿದು ಹಾಕಿದ್ದೆ. ಸಹೋದರಿಯ ಮದುವೆಯ ಸಂದರ್ಭದಲ್ಲಿ ಹಣದ ಕೊರತೆಯಾದಾಗಲೂ ಪರರ ಬಳಿ ಕೈಯೊಡ್ಡಲಿಲ್ಲ. ತಮ್ಮ ಆಟಕ್ಕಾಗಿ ಲಭಿಸಿದ್ದ ಕಾಣಿಕೆಯನ್ನೇ ಮಾರಿದ್ದರು.

ಇಲ್ಲಿ ನನ್ನ ಚಿಕ್ಕಪ್ಪ ಕ್ಯಾಪ್ಟನ್ ರೂಪ್‌ ಸಿಂಗ್ ಬಗ್ಗೆ ಹೇಳಲೇಬೇಕು. ಅವರು ಕೂಡ ಧ್ಯಾನಚಂದ್ ಅವರೊಂದಿಗೆ ಎರಡು ಒಲಿಂಪಿಕ್ ಚಿನ್ನದ ಪದಕ ವಿಜೇತರು. ಗ್ವಾಲಿಯರ್‌ನ ಮಹಾರಾಜರ ಸೇನೆಯಲ್ಲಿದ್ದವರು. ಆದರೆ ಜೀವನದುದ್ದಕ್ಕೂ ಎರಡು ಕೋಣೆಗಳಿರುವ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ಜೀವನ ಸವೆಸಿದರು. ಅವರು ಕ್ಷಯರೋಗಕ್ಕೆ ತುತ್ತಾದಾಗ ಚಿಕಿತ್ಸೆಗಾಗಿ ಧ್ಯಾನಚಂದ್ ಅವರು ಸಹಾಯಾರ್ಥ ಪಂದ್ಯವಾಡಿ ದೇಣಿಗೆ ಸಂಗ್ರಹಿಸಿದರು. 1972ರಲ್ಲಿ ಮ್ಯೂನಿಚ್‌ನಲ್ಲಿರುವ ರಸ್ತೆಯೊಂದಕ್ಕೆ ರೂಪ್‌ ಸಿಂಗ್ ಅವರ ಹೆಸರು ಇಡಲಾಗಿದೆ. ಆದರೆ ಆ ಕಾಲದಲ್ಲಿ ನಮ್ಮ ಸರ್ಕಾರ, ಸಂಸ್ಥೆಗಳು ಅವರಿಗೆ ಒಂದು ಮನೆಯನ್ನೂ ಕೊಡದಿರುವುದು ನಾಚಿಕೆಗೇಡಿನ ಸಂಗತಿ.

ಇಂದಿನ ಮಕ್ಕಳಿಗೆ ಆ ರೀತಿಯಾಗಬಾರದು. ಕ್ರೀಡಾಪಟುಗಳಿಗೆ ಒಳ್ಳೆಯ ಜೀವನ ಸಿಗಬೇಕು. ಸಮಾಜ, ದೇಶಗಳು ಗೌರವಿಸಬೇಕು. ಆಟಗಾರರೂ ಅಷ್ಟೇ. ತಮಗೆ ಸಿಕ್ಕ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಧ್ಯಾನಚಂದ್ ಅವರಂತೆ ಹಾಕಿ ಆಟಗಾರನಾಗಿ ಬೆಳೆಯಬೇಕು. ಅದರೊಂದಿಗೆ ಸ್ವಾಭಿಮಾನಿಯಾಗಿ, ದೇಶಪ್ರೇಮಿಯಾಗಿಯೂ ರೂಪುಗೊಳ್ಳಬೇಕು. ಏಕೆಂದರೆ ನನ್ನ ತಂದೆ ನಿಜವಾದ ಭಾರತರತ್ನ.

(ಲೇಖಕರು: ಧ್ಯಾನಚಂದ್ ಅವರ ಪುತ್ರ,
ವಿಶ್ವ ಹಾಕಿ ಟೂರ್ನಿಯಲ್ಲಿ ಚಿನ್ನದ ಪದಕ ವಿಜೇತರು)

ನಿರೂಪಣೆ: ಜಿ.ಡಿ.

ಕನ್ನಡದಲ್ಲಿ ‘ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್’

‘ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್’ ಕನ್ನಡದ ಕ್ರೀಡಾಪ್ರೇಮಿಗಳನ್ನು ಓದಲು ಹಚ್ಚುವಂತಹ ಕೃತಿ. ಹಲವು ದೇಶಗಳಲ್ಲಿ ಅಭಿಮಾನಿಗಳನ್ನು ಸಂಪಾದಿಸಿರುವ ಧ್ಯಾನಚಂದ್ ಅವರ ಬಾಲ್ಯ, ಕ್ರೀಡಾಜೀವನ, ವೃತ್ತಿಜೀವನ ಮತ್ತು ಕೊನೆಯ ಹಂತದಲ್ಲಿ ಅನುಭವಿಸಿದ ಕಷ್ಟನಷ್ಟಗಳನ್ನು ಮನೋಜ್ಞವಾಗಿ ವಿವರಿಸಿರುವ ಪುಸ್ತಕ ಇದು. ಗಿಂದೂ ಟೋರಾ ಎಂಬ ಭಾರತೀಯ ಜನಪದ ಕ್ರೀಡೆಯೇ ಹಾಕಿ ಆಟದ ಹುಟ್ಟಿಗೆ ಕಾರಣವಾಗಿರಬಹುದು ಎಂಬ ಹೊಳಹು ನೀಡುತ್ತ ಧ್ಯಾನಚಂದ್ ಜೀವನಗಾಥೆಯೊಳಕ್ಕೆ ಕರೆದೊಯ್ಯುವ ಲೇಖಕರ ಬರವಣಿಗೆ ಗಮನ ಸೆಳೆಯುತ್ತದೆ. ಜಾರ್ಖಂಡ್‌ನ ರಾಂಚಿಯಲ್ಲಿ ಪ್ರಾಧ್ಯಾಪಕರಾಗಿರುವ, ಮೂಲತಃ ಹುಬ್ಬಳ್ಳಿಯವರಾದ ಡಾ. ನಾಗ ಎಚ್. ಹುಬ್ಳಿ ಅವರ ಕ್ರೀಡಾಸ‌ಕ್ತಿ ಮತ್ತು ಧ್ಯಾನಚಂದ್ ಬಗೆಗಿನ ಅಭಿಮಾನ ಈ ಕೃತಿಯಲ್ಲಿ ಕಾಣುತ್ತದೆ. ಧ್ಯಾನಚಂದ್ ಆಡಿದ ಪಂದ್ಯಗಳು, ಜೀವನದ ಒಳನೋಟಗಳ ಕುರಿತ ಅಧ್ಯಯನವೂ ಒಡಮೂಡಿದೆ. ಒಟ್ಟಾರೆ ಕ್ರೀಡಾ ಕೃತಿಗಳ ಬರ ಎದುರಿಸುತ್ತಿರುವ ಕನ್ನಡ ಭಾಷೆಗೆ ಒಂದು ಉತ್ತಮ ಕೊಡುಗೆ ಇದಾಗಿದೆ.

ಪ್ರಕಾಶಕರು: ವಿಕ್ರಂ ಪ್ರಕಾಶನ
ಪುಟಗಳು: 216
ಬೆಲೆ: ₹ 200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT