ಬೆಂಗಳೂರು: ಇಂಟರ್ನ್ಯಾಷನಲ್ ಮಾಸ್ಟರ್ ಶರಣ್ ರಾವ್, ಭಾನುವಾರ ಹೊಸಕೋಟೆ ತಾಲ್ಲೂಕಿನ ದೊಡ್ಡ ದುನ್ನಸಂದ್ರದಲ್ಲಿ ಮುಕ್ತಾಯಗೊಂಡ ಕರ್ನಾಟಕ ರಾಜ್ಯ ರ್ಯಾಪಿಡ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ರಾಜ್ಯ ಬ್ಲಿಟ್ಝ್ ಚಾಂಪಿಯನ್ಷಿಪ್ ಪ್ರಶಸ್ತಿ ಮಂಗಳೂರಿನ ಸಿದ್ಧಾಂತ್ ಪೂಂಜಾ ಅವರ ಪಾಲಾಯಿತು.
ಶೃಂಗ ಇಂಟರ್ನ್ಯಾಷನಲ್ ಶಾಲೆಯಲ್ಲಿ, ಬೆಂಗಳೂರು ಗ್ರಾಮೀಣ ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಎರಡು ದಿನಗಳ ರ್ಯಾಪಿಡ್ ಟೂರ್ನಿಯಲ್ಲಿ ಮಂಗಳೂರಿನ ಶರಣ್ 9 ಸುತ್ತುಗಳಿಂದ ಎಂಟು ಪಾಯಿಂಟ್ಸ್ (7 ಗೆಲುವು, 2 ಡ್ರಾ) ಗಳಿಸಿ ಅಜೇಯರಾಗುಳಿದರು. ಮೈಸೂರಿನ ಬಾಲಕಿಶನ್ ಎ ಮತ್ತು ಅಮನ್ ಖನ್ನಾ ಅವರೂ ತಲಾ ಎಂಟು ಪಾಯಿಂಟ್ಸ್ ಸಂಗ್ರಹಿಸಿದರೂ ಟೈಬ್ರೇಕ್ ಆಧಾರದ ಮೇಲೆ ಎರಡು ಮತ್ತು ಮೂರನೇ ಸ್ಥಾನ ಪಡೆದರು.
ಶರಣ್ ಮತ್ತು ಬಾಲಕಿಶನ್ ಅವರು ಜಾರ್ಖಂಡ್ನಲ್ಲಿ ಮುಂದಿನ ಫೆಬ್ರುವರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ರ್ಯಾಪಿಡ್ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
‘ಟೂರ್ನಿ ತೀವ್ರ ಪೈಪೋಟಿಯಿಂದ ಕೂಡಿತ್ತು. ರ್ಯಾಪಿಡ್ ವಿಭಾಗದಲ್ಲಿ ಭಾಗವಹಿಸಿದ್ದ 336 ಆಟಗಾರರಲ್ಲಿ 190 ಮಂದಿ ರೇಟೆಡ್ ಆಟಗಾರರಿದ್ದರು’ ಎಂದು ಚೀಫ್ ಆರ್ಬಿಟರ್, ಹುಬ್ಬಳ್ಳಿಯ ಕೆ.ವಿ.ಶ್ರೀಪಾದ್ ತಿಳಿಸಿದರು.
ಬ್ಲಿಟ್ಸ್ ಚಾಂಪಿಯನ್ಷಿಪ್ನಲ್ಲಿ ಸಿದ್ಧಾಂತ್ ಮತ್ತು ಪ್ರಣವ್ ಎ.ಜೆ. ತಲಾ 8 ಅಂಕ ಪಡೆದರೂ, ಟೈಬ್ರೇಕ್ ಆಧಾರದಲ್ಲಿ ಪ್ರಣವ್ ಮೊದಲಿಗರಾದರು. ಪಾರ್ಥಸಾರಥಿ ಆರ್., ಅರ್ಕಸೇನ ಗುಪ್ತಾ ಮತ್ತು ಪ್ರೀತಮ್ ಶರ್ಮಾ (ತಲಾ 7.5) ಕ್ರಮವಾಗಿ ಮೂರರಿಂದ ಐದರವರೆಗಿನ ಸ್ಥಾನಗಳನ್ನು ಪಡೆದರು.
ಸಿದ್ಧಾಂತ್ ಮತ್ತು ಪ್ರಣವ್ ಅವರು ಮುಂದಿನ ರಾಷ್ಟ್ರೀಯ ಬ್ಲಿಟ್ಝ್ ಚಾಂಪಿಯನ್ಷಿಪ್ನಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.