ಲಖನೌ: ಅಥ್ಲೀಟ್ ಆಗುವ ಕನಸು ಹೊತ್ತ 10 ವರ್ಷದ ಬಾಲಕಿಯೊಬ್ಬಳು ಪ್ರಯಾಗ್ರಾಜ್ನಿಂದ ಲಖನೌಗೆ ಸುಮಾರು 200 ಕಿಲೋ ಮೀಟರ್ ಓಡಿ ಮುಖ್ಯಮಂತ್ರಿ ಆದಿತ್ಯನಾಥ ಅವರನ್ನು ಭೇಟಿ ಮಾಡಿದ್ದಾಳೆ.
ಮಂಡಾ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿಯಾಗಿರುವ, ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಕಾಜಲ್, ಶನಿವಾರ ಮುಖ್ಯಮಂತ್ರಿ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿದ್ದಾಳೆ. ಈ ವೇಳೆ ಮುಖ್ಯಮಂತ್ರಿ ಬಾಲಕಿಗೆ ಬೂಟು, ಟ್ರ್ಯಾಕ್ಸ್ಯೂಟ್ ಮತ್ತು ಕಿಟ್ ಕೊಡುಗೆಯಾಗಿ ನೀಡಿ ಶುಭ ಹಾರೈಸಿದರು.
ಏಪ್ರಿಲ್ 10ರಂದು ಓಟ ಆರಂಭಿಸಿದ್ದ ಕಾಜಲ್, ಶುಕ್ರವಾರ ಲಖನೌ ತಲುಪಿದ್ದಳು ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಹೋದ ವರ್ಷ ಕಾಜಲ್, ಇಂದಿರಾ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದಳು.ಆಕೆಯ ಪ್ರಯತ್ನವನ್ನು ಶಾಲೆಯಾಗಲಿ ಅಥವಾ ಜಿಲ್ಲಾಡಳಿತವಾಗಲಿ ಶ್ಲಾಘಿಸದ ಹಿನ್ನೆಲೆಯಲ್ಲಿ ನಿರಾಶೆಯಾಗಿತ್ತು. ಮ್ಯಾರಥಾನ್ ನಂತರ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಭೇಟಿ ಮಾಡುವ ಬಯಕೆ ವ್ಯಕ್ತಪಡಿಸಿದ್ದಳು.
ಲಖನೌನ ಬಾಬು ಬನಾರಸಿ ದಾಸ್ ಕ್ರೀಡಾ ಅಕಾಡೆಮಿ ಕೂಡ ಕಾಜಲ್ ಪ್ರತಿಭೆಯನ್ನು ಗೌರವಿಸಿದ್ದು, ಜೀವನದುದ್ದಕ್ಕೂ ಅವಳ ಕ್ರೀಡಾ ಕಿಟ್ ಮತ್ತು ಶೂಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.