ಬೆಂಗಳೂರು: ಕರ್ನಾಟಕದ ಬಾಲಕರ ತಂಡದವರು ಇಲ್ಲಿ ನಡೆಯುತ್ತಿರುವ 72ನೇ ರಾಷ್ಟ್ರೀಯ ಜೂನಿಯರ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಆದರೆ ಮಹಿಳಾ ತಂಡದವರು ಮುಂದಿನ ಹಂತ ಪ್ರವೇಶಿಸಲು ವಿಫಲರಾದರು.
ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ತಂಡ 83–80 ರಲ್ಲಿ ಪಂಜಾಬ್ ತಂಡವನ್ನು ಮಣಿಸಿತು. ಎನ್.ಎಂ. ವಿಷ್ಣು (23 ಪಾಯಿಂಟ್ಸ್) ಮತ್ತು ನಿತಿನ್ ಕುಮಾರ್ (20 ಪಾಯಿಂಟ್ಸ್) ಅವರು ಕರ್ನಾಟಕದ ರೋಚಕ ಗೆಲುವಿಗೆ ಕಾರಣರಾದರು. ಪಂಜಾಬ್ ತಂಡಕ್ಕೆ ಹರ್ಮನ್ಜೋತ್ 28 ಮತ್ತು ಶಾನು ಪ್ರತಾಪ್ 21 ಪಾಯಿಂಟ್ಸ್ ತಂದಿತ್ತರು.
ಕೊನೆಯ ಪಂದ್ಯದಲ್ಲಿ ಸೋತರೂ ಪಂಜಾಬ್ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಬಾಲಕರ ವಿಭಾಗದಲ್ಲಿ ತಮಿಳುನಾಡು, ರಾಜಸ್ಥಾನ, ಚಂಡೀಗಢ, ಮಿಜೋರಾಂ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ತಂಡಗಳೂ ಮುಂದಿನ ಹಂತಕ್ಕೆ ಲಗ್ಗೆಯಿಟ್ಟವು.