ನವದೆಹಲಿ: ಬ್ಯಾಡ್ಮಿಂಟನ್ ಆಟಗಾರ್ತಿ ಎನ್. ಸಿಕ್ಕಿರೆಡ್ಡಿ ಮತ್ತು ಅವರ ಫಿಸಿಯೊಥೆರಪಿಸ್ಟ್ ಸಿ. ಕಿರಣ್ ಅವರಿಗೆ ಕೋವಿಡ್ –19 ಸೋಂಕು ಇರುವುದು ಖಚಿತವಾಗಿದೆ.
ಸಿಕ್ಕಿ ರೆಡ್ಡಿಯವರು ಅಭ್ಯಾಸ ಮಾಡುವ ಪುಲ್ಲೇಲ ಗೋಪಿಚಂದ್ ಅಕಾಡೆಮಿಯನ್ನು ಬಂದ್ ಮಾಡಲಾಗಿದೆ. ಗುರುವಾರ ಸ್ಯಾನಿಟೈಸೇಷನ್ ಕೈಗೊಳ್ಳಲಾಯಿತು.
ಸಿಕ್ಕಿ ಮತ್ತು ಕಿರಣ್ ಅವರಿಗೆ ಲಕ್ಷಣರಹಿತ ಸೋಂಕು ಇರುವುದಾಗಿ ಭಾರತೀಯ ಕ್ರೀಡಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಆಗಸ್ಟ್ 7ರಂದು ತರಬೇತಿ ಆರಂಭವಾದಾಗ ಸಾಯ್ನಲ್ಲಿ ಎಲ್ಲ ಆಟಗಾರರಿಗೆ ಕಡ್ಡಾಯ ಆರೋಗ್ಯ ಪರೀಕ್ಷೆ ನಡೆಸಲಾಗಿತ್ತು. ಆಗ ಸಿಕ್ಕಿ ಮತ್ತು ಕಿರಣ್ ಅವರಿಗೆ ಸೋಂಕು ಇರುವುದು ಪತ್ತೆಯಾಯಿತು.
ಡಬಲ್ಸ್ ಬ್ಯಾಡ್ಮಿಂಟನ್ ಪರಿಣತರಾಗಿರುವ ಸಿಕ್ಕಿ ಇಂಡೊನೇಷ್ಯಾದ ಮೂವರು ಕೋಚ್ಗಳೊಂದಿಗೆ ಅಭ್ಯಾಸ ನಡೆಸಲಿದ್ದರು. ಇಂಡೊನೇಷ್ಯಾದ ನಮ್ರಿ ಸುರೊತೊ, ಎಗಸ್ ದ್ವಿ ಸ್ಯಾಂಟೊಸೊ ಮತ್ತು ಮಿಫ್ತಾ ಅವರು ತರಬೇತಿ ನೀಡಲು ಇಲ್ಲಿಗೆ ಬಂದಿದ್ದಾರೆ.