ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಸರಬರಾಜಿಗೆ ಕೈಜೋಡಿಸಿದ ಶೂಟರ್‌ಗಳು

Last Updated 9 ಮೇ 2021, 15:54 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶದ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ರೋಗಿಗಳಿಗಳಿಗೆ ಆಮ್ಲಜನಕದ ಕೊರತೆಯನ್ನು ನೀಗಿಸಲು ರಾಷ್ಟ್ರಮಟ್ಟದ ನೂರು ಮಂದಿ ಶೂಟರ್‌ಗಳು ಕೈಜೋಡಿಸಿದ್ದಾರೆ.

ಪ್ರಮುಖ ಶೂಟರ್‌ಗಳಾದ ಆಶುತೋಷ್ ದ್ವಿವೇದಿ, ಪ್ರದೀಪ್ ಕುಮಾರ್ ಸಿಂಗ್, ತಬಿಷ್ ಅಹಮದ್, ರಾಹುಲ್ ಸೋನಿ, ಮೊನುಕುಮಾರ್, ಹರಪ್ರೀತ್ ಸಿಂಗ್, ಶೈಲೆಂದರ್ ಈ ಅಭಿಯಾನದ ಮುಂಚೂಣಿಯಲ್ಲಿದ್ದಾರೆ. ಉತ್ತರಪ್ರದೇಶ, ದೆಹಲಿ ಮತ್ತು ಹರಿಯಾಣದ ಶೂಟರ್‌ಗಳು ಕೈಜೋಡಿಸಿದ್ದಾರೆ.

‘ಕೋವಿಡ್‌ ರೋಗಿಗಳು ಸೂಕ್ತ ಸಮಯದಲ್ಲಿ ಆಮ್ಲಜನಕ ಸಿಗದೇ ಜೀವ ಕಳೆದುಕೊಂಡಿರುವುದನ್ನು ನೋಡಿದ್ದೇವೆ. ಕೋವಿಡ್‌ನಿಂದ ಬಹಳಷ್ಟು ತೊಂದರೆಯಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಕೈಲಾದಷ್ಟು ನೆರವು ಸಲ್ಲಿಸುವುದು ಕರ್ತವ್ಯ‘ ಎಂದು ಕೋಚ್ ದೀಪಕ್ ದುಬೆ ಹೇಳಿದರು. ಒಲಿಂಪಿಕ್ಸ್‌ ಗೆ ತೆರಳಲಿರುವ ದಿವ್ಯಾಂಶ್ ಸಿಂಗ್ ಪನ್ವರ್ ಅವರಿಗೆ ದುಬೆ ಅವರೇ ತರಬೇತುದಾರರಾಗಿದ್ದಾರೆ.

ರಾಷ್ಟ್ರಮಟ್ಟದ ಶೂಟರ್ ಮತ್ತು ರಾಡಿಕ್ ಕನ್ಸಲ್ಟಂಟ್ಸ್‌ ಸಿ.ಎಂ.ಡಿ ರಾಜಕುಮಾರ್ ಅವರು ಮೊದಲಿಗೆ ಈ ಅಭಿಯಾನ ಆರಂಭಿಸಿದರು. ನಂತರ ಶೂಟಿಂಗ್ ಪಟುಗಳಿಗೆ ಮನವಿ ಮಾಡಿದರು. ರಾಡಿಕ್ ಸಂಸ್ಥೆಯು ವಿನೂತನವಾದ ಡಿಜಿಟಲ್ ತಾಣವೊಂದನ್ನು ಅಭಿವೃದ್ಧಿಪಡಿಸಿದೆ. ಅದರ ಮೂಲಕ ಉತ್ತರಪ್ರದೇಶದಲ್ಲಿ ಆಸ್ಪತ್ರೆ ಮತ್ತು ಆರೋಗ್ಯಕೇಂದ್ರಗಳಲ್ಲಿ ಆಮ್ಲಜನಕದ ಲಭ್ಯತೆ, ಕೊರತೆ ಮತ್ತು ಸರಬರಾಜಿನ ಕುರಿತು ನಿಗಾ ವಹಿಸಲು ಸಾಧ್ಯವಾಗುತ್ತಿದೆ.

‘ಇದೊಂದು ಅನಿರೀಕ್ಷಿತವಾದ ಆಘಾತಕಾರಿ ಕಾಲವಾಗಿದೆ. ಇದನ್ನು ಎದುರಿಸುವುದು ಯುದ್ಧಕ್ಕೆ ಸಮಾನ. ಪರಸ್ಪರ ಎಲ್ಲರೂ ಕೈಜೋಡಿಸಿದರೆ ಹೋರಾಟಕ್ಕೆ ಬಲ ಬರುತ್ತದೆ. ಆದ್ದರಿಂದ ಹೆಚ್ಚು ಸ್ವಯಂಸೇವಕರು ಬೇಕಾಗುತ್ತಾರೆ. ಆದ್ದರಿಂದ ನನ್ನ ಎಲ್ಲ ಸಹ ಆಟಗಾರರನ್ನು ಕೇಳಿಕೊಂಡಿದ್ದೇನೆ. ಅವರಿಂದ ನೆರವು ಹರಿದುಬರುತ್ತಿದೆ‘ ಎಂದು ರಾಜಕುಮಾರ್ ತಿಳಿಸಿದ್ದಾರೆ.

ಆಮ್ಲಜನಕ ಸರಬರಾಜು ವಾಹನಗಳ ಚಲನವಲನ, ಸಮಯಪರಿಪಾಲನೆಯ ಕುರಿತೂ ಈ ಡಿಜಿಟಲ್ ಮೂಲಕ ನಿಗಾ ವಹಿಸಲಾಗುತ್ತಿದೆ. ಜೊತೆಗೆ ವಾಹನಗಳು ಅತ್ಯಂತ ಶೀಘ್ರವಾಗಿ ತುರ್ತು ಅಗತ್ಯ ಇದ್ದಲ್ಲಿಗೆ ತಲುಪಲು ಜಿಪಿಎಸ್‌ ವೆಬ್ ಅಪ್ಲಿಕೇಷನ್ ಮೂಲಕ ಸಹಾಯ ಮಾಡಲಾಗುತ್ತಿದೆ. ಆಯಕಟ್ಟಿನ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಡಿಜಿಟಲ್ ಟ್ರ್ಯಾಕಿಂಗ್ ಸಿಸ್ಟಂಗಳ ಮೂಲಕ ದತ್ತಾಂಶ ಸಂಗ್ರಹಿಸಲಾಗುತ್ತದೆ. ಇದರಿಂದಾಗಿ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲೂ ನೆರವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT