ಬ್ಯಾಂಕಾಕ್: ಥಾಮಸ್ ಮತ್ತು ಊಬರ್ ಕಪ್ ಬ್ಯಾಡ್ಮಿಂಟನ್ ಫೈನಲ್ ಟೂರ್ನಿಯಲ್ಲಿ ಭಾರತ ಪುರುಷರ ಮತ್ತು ಮಹಿಳಾ ತಂಡಗಳು ಮೊದಲ ಬಾರಿ ಚಿನ್ನದ ಪದಕ ಜಯಿಸುವ ಛಲದಲ್ಲಿವೆ.
ಭಾನುವಾರದಿಂದ ಇಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತ ತಂಡಗಳಿಗೆ ಲಕ್ಷ್ಯ ಸೇನ್ ಮತ್ತು ಪಿ.ವಿ.ಸಿಂಧು ನೇತೃತ್ವ ವಹಿಸಲಿದ್ದಾರೆ.
ಥಾಮಸ್ ಕಪ್ ಟೂರ್ನಿಯಲ್ಲಿ ಪುರುಷರ ತಂಡವು ಒಮ್ಮೆಯೂ ಪದಕ ಜಯಿಸಿಲ್ಲ. ಕನಿಷ್ಠ ಸೆಮಿಫೈನಲ್ ಕೂಡ ತಲುಪಿಲ್ಲ. ಆದರೆ ಮಹಿಳಾ ತಂಡವು ಊಬರ್ ಕಪ್ ಟೂರ್ನಿಯಲ್ಲಿ ಸತತ ಎರಡು ಬಾರಿ (2014 ಮತ್ತು 2016ರ ಆವೃತ್ತಿ) ಕಂಚಿನ ಪದಕದ ಸಾಧನೆ ಮಾಡಿದೆ.
ಕಳೆದ ವರ್ಷ ಉಭಯ ತಂಡಗಳು ಕ್ವಾರ್ಟರ್ಫೈನಲ್ನಲ್ಲೇ ಅಭಿಯಾನ ಕೊನೆಗೊಳಿಸಿದ್ದವು.
ಈ ಬಾರಿ ಪುರುಷರ ಸಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಮೊದಲ ಪಂದ್ಯದಲ್ಲಿ ಜರ್ಮನಿ ಸವಾಲು ಎದುರಿಸಲಿದೆ. ಚೀನಾ ತೈಪೆ ಮತ್ತು ಕೆನಡಾ ಈ ಗುಂಪಿನಲ್ಲಿರುವ ಇನ್ನುಳಿದ ತಂಡಗಳು.
ಡಿ ಗುಂಪಿನಲ್ಲಿರುವ ಮಹಿಳಾ ತಂಡಕ್ಕೆ ದಕ್ಷಿಣ ಕೊರಿಯಾ, ಕೆನಡಾ ಮತ್ತು ಅಮೆರಿಕ ತಂಡಗಳನ್ನು ಎದುರಿಸಬೇಕಿದೆ.ಡ್ರಾ ಪ್ರಕಾರ 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಅಗ್ರ ಎರಡು ಸ್ಥಾನ ಪಡೆದ ತಂಡಗಳು ನಾಕೌಟ್ಗೆ ಅರ್ಹತೆ ಗಳಿಸಲಿವೆ.