ಬೆಂಗಳೂರು: ಪ್ರೊ ಕಬಡ್ಡಿ ಲೀಗ್ನಲ್ಲಿ ಪಾಲ್ಗೊಳ್ಳುವ ಬೆಂಗಳೂರು ಬುಲ್ಸ್ ತಂಡದ ಅಭಿಮಾನಿಗಳಿಗಾಗಿ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ‘ಕೊಂಬು ಎತ್ತು’ ಎಂಬ ಕಾರ್ಯಕ್ರಮ ಆಯೋಜಿಸಿದ್ದು ಚಿತ್ರನಟ ಸುದೀಪ್ ಇದರ ಪ್ರೊಮೊದಲ್ಲಿ ಕಾಣಿಸಿಳ್ಳಲಿದ್ದಾರೆ.
ಕೋವಿಡ್ನಿಂದಾಗಿ ಎರಡು ವರ್ಷ ನಡೆಯದೇ ಇದ್ದ ಲೀಗ್ನ ಎಂಟನೇ ಆವೃತ್ತಿ ಇದೇ 22ರಂದು ಆರಂಭವಾಗಲಿದೆ. ಸುರಕ್ಷತೆಗೆ ಒತ್ತು ನೀಡಿ ಒಂದೇ ಸ್ಥಳದಲ್ಲಿ ಎಲ್ಲ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ನಗರದ ವೈಟ್ಫೀಲ್ಡ್ನ ಹೋಟೆಲ್ ಶೆರಟಾನ್ನ ಸಭಾಂಗಣದಲ್ಲಿ ‘ಮ್ಯಾಟ್’ ಸಿದ್ಧಪಡಿಸಲಾಗಿದೆ. ತಂಡಗಳು ಈಗಾಗಲೇ ಇಲ್ಲಿಗೆ ಬಂದಿದ್ದು ಆಟಗಾರರು ಬಯೊಬಬಲ್ನಲ್ಲಿದ್ದಾರೆ.
ಬೆಂಗಳೂರು ಬುಲ್ಸ್ ಮೊದಲ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಸೆಣಸಲಿದ್ದು 22ರಂದು ರಾತ್ರಿ 7.30ಕ್ಕೆ ಈ ಪಂದ್ಯ ನಡೆಯಲಿದೆ. ಕಳೆದ ಬಾರಿ ನಾಕೌಟ್ ಹಂತಕ್ಕೇರಿದ್ದರೂ ಫೈನಲ್ ಪ್ರವೇಶಿಸಲು ವಿಫಲವಾಗಿದ್ದ ಬೆಂಗಳೂರು ಬುಲ್ಸ್ಗೆ ಪ್ರಶಸ್ತಿ ಉಳಿಸಿಕೊಳ್ಳಲು ಆಗಲಿಲ್ಲ. ಈ ಬಾರಿ ಮತ್ತೆ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟು ತಂಡ ಕಣಕ್ಕೆ ಇಳಿಯಲಿದೆ.
ಸ್ಟಾರ್ ರೈಡರ್ ಪವನ್ ಕುಮಾರ್ ಶೆರಾವತ್ ಈಗಲೂ ತಂಡದ ಭರವಸೆಯಾಗಿದ್ದು ಚಂದ್ರನ್ ರಂಜಿತ್, ಜಿ.ಬಿ ಮೋರೆ, ದೀಪಕ್ ನರ್ವಾಲ್, ಡಾಂಗ್ ಜಿಯಾನ್ ಲೀ, ಅಬುಲ್ ಫಜಲ್ ಮುಂತಾದವರು ತಂಡದ ಶಕ್ತಿಯಾಗಿ ಉಳಿದಿದ್ದಾರೆ.