ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್ನಲ್ಲಿ ನಮಗೆ ಪದಕ ಗೆಲ್ಲುವ ಉತ್ತಮ ಅವಕಾಶ ಮತ್ತು ಸಾಮರ್ಥ್ಯ ಇದೆ ಎಂದು ಭಾರತ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಟೋಕಿಯೊ ಕೂಟಕ್ಕಾಗಿ ಕಾತರದಿಂದ ಕಾಯುತ್ತಿರುವುದಾಗಿ ಅವರು ಹೇಳಿದ್ದಾರೆ.
ಭಾರತ ತಂಡ ಇದುವರೆಗೆ ಒಲಿಂಪಿಕ್ಸ್ನಲ್ಲಿ ಎಂಟು ಚಿನ್ನದ ಪದಕಗಳನ್ನು ಗೆದ್ದಿದೆ. 1980ರಲ್ಲಿ ಮಾಸ್ಕೋದಲ್ಲಿ ಗೆದ್ದಿದ್ದು ಕೊನೆಯದು.
‘ಈ ಬಾರಿ ನಾವು ಪದಕ ಗೆಲ್ಲುವ ಅವಕಾಶದ ಬಗ್ಗೆ ಅಪಾರ ವಿಶ್ವಾಸವಿದೆ. ಈ ವಿಶ್ವಾಸವೇ ನಮಗೆ ಪ್ರೇರಣೆ ಮತ್ತು ಆಶಾವಾದವನ್ನು ತುಂಬಿದೆ‘ ಎಂದು ಒಲಿಂಪಿಕ್ಸ್ ಆರಂಭಕ್ಕೆ 75 ದಿನ ಬಾಕಿ ಉಳಿದಿರುವ ಸಂದರ್ಭದಲ್ಲಿ ಮನ್ಪ್ರೀತ್ಮಾತನಾಡಿದರು.
ಇದೇ ವರ್ಷದ ಜುಲೈ 23ರಿಂದ ಕೂಟ ನಡೆಯಬೇಕಿದೆ.
‘ನಮ್ಮ ತರಬೇತಿಯನ್ನು ನಾವು ಸೂಕ್ತ ಸಮಯದಲ್ಲಿ ಉತ್ತುಂಗಕ್ಕೇರಿಸುವ ರೀತಿಯಲ್ಲಿ ಯೋಜಿಸಲಾಗಿದೆ ಮತ್ತು ಟೋಕಿಯೊದಲ್ಲಿನ ಬಿಸಿಲಿನ ಪರಿಸ್ಥಿತಿಗಳಿಗೆ ನಮ್ಮ ದೇಹಗಳು ಒಗ್ಗಿಕೊಳ್ಳಲು ಮಾಡಲು ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದೇವೆ‘ ಎಂದು ಮನ್ಪ್ರೀತ್ ನುಡಿದರು.
‘ಜರ್ಮನಿ ಹಾಗೂ ಸ್ಪೇನ್ ಎದುರು ಆಡಬೇಕಿದ್ದ ಎಫ್ಐಎಚ್ ಪ್ರೊ ಲೀಗ್ ಪಂದ್ಯಗಳು ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿರುವುದು ನಮಗೆ ಹಿನ್ನಡೆ. ಆ ಪಂದ್ಯಗಳಿಂದ ನಮ್ಮ ಸಿದ್ಧತೆಗೆ ಅನುಕೂಲವಾಗುತ್ತಿತ್ತು. ಆದರೆ ಇದು ನಿಜವಾಗಿ ಸಂಕಷ್ಟದ ಸಮಯ. ಪ್ರಯಾಣ ನಿರ್ಬಂಧಗಳು ಇವೆ‘ ಎಂದೂ ಭಾರತ ತಂಡದ ನಾಯಕ ನುಡಿದರು.
ಕೋವಿಡ್ನಿಂದ ಚೇತರಿಸಿಕೊಂಡಿರುವ ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಸೇರಿದಂತೆ ಏಳು ಆಟಗಾರ್ತಿಯರು ಮುಂದಿನ ವಾರದಿಂದ ತರಬೇತಿಗೆ ಮರಳಲಿದ್ದಾರೆ.
‘ಕೊರೊನಾ ಸೋಂಕಿತರಾಗಿದ್ದ ಎಲ್ಲ ಆಟಗಾರ್ತಿಯರು ಈಗ ಆರೋಗ್ಯವಾಗಿದ್ದು, ತರಬೇತಿಗೆ ಸಜ್ಜಾಗುತ್ತಿದ್ದೇವೆ‘ ಎಂದು ರಾಣಿ ನುಡಿದರು.